ಕಾನೂನು ನಮ್ಮ ನಡೆ, ನುಡಿಯಲ್ಲಿದ್ದರೆ ಉತ್ತಮ ಸಮಾಜ ಸಾಧ್ಯ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಭಾನು ಮುಷ್ತಾಕ್
ಚಿಕ್ಕಮಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನದ ಮೂಲಕ ಎಲ್ಲಾ ಜಾತಿ, ಧರ್ಮದ ಜನರು ಗೌರವದಿಂದ ಬದುಕುವ ಹಕ್ಕು ನೀಡಿದ್ದಾರೆಂದು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ, ಸಾಹಿತಿ ಭಾನು ಮುಷ್ತಾಕ್ ಹೇಳಿದರು.
ಅವರು ಸೋಮವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದ ಅನುಭವ ಮಂಟಪ ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 135ನೇ ಡಾ.ಬಿ.ಆರ್.ಅಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಜನರು ನೆಮ್ಮದಿಯಿಂದ ಬದುಕಬೇಕೆಂಬ ದೃಷ್ಟಿಯಿಂದ ಇಡೀ ಬದುಕನ್ನೇ ಈ ಸಮಾಜಕ್ಕಾಗಿ ಅರ್ಪಿಸಿ ಸಂವಿಧಾನ ಕೊಟ್ಟಿದ್ದಾರೆ. ಇದರಿಂದ ನಮಗೆ ಸಮಾನವಾದ ಹಕ್ಕು ಹಾಗೂ ಅವಕಾಶಗಳು ಸಂವಿಧಾನಾತ್ಮಕವಾಗಿ ದೊರಕಿದ್ದರೂ, ಸ್ವಾರ್ಥ ಮನಸ್ಸುಗಳಿಂದ ದ್ವೇಷ ಭಾವನೆಯಿಂದಲೇ ಬದುಕುವ ಸ್ಥಿತಿ ಉಂಟಾಗಿದೆ. ನ್ಯಾಯ ಎನ್ನುವುದು ಕಾನೂನಿನಲ್ಲಿ ಬರುವ ಪದಕ್ಕಿಂತ ಅದು ನಮ್ಮ ನಡೆ, ನುಡಿಯಲ್ಲಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ಪ್ರಗತಿಪರ ಲೇಖಕ ಹಿರಿಯ ಚಿಂತಕ ಶಿವಸುಂದರ್ ಮಾತನಾಡಿ, ಈ ಸಮಾಜದಲ್ಲಿ ಜಾತಿ, ಬಡವ, ಶ್ರೀಮಂತ ಎಂಬ ಬೇಧ ಭಾವದ ರೋಗ ಅಂಟಿಕೊಂಡಿದೆ. ಅದನ್ನು ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಎಂಬ ಔಷಧಿ ಕೊಟ್ಟರು. ಆದರೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಅವರನ್ನು ಪಂಚತೀರ್ಥ ಎಂದು ಬಿಂಬಿಸಲು ಹೊರಟಿರುವುದು ಅಪಾಯದ ಸಂಗತಿ. ಅಂಬೇಡ್ಕರ್ ಅವರ ಆಶಯಗಳು ಈಡೇರಬೇಕೆಂದರೆ ನಮ್ಮೊಳಗೆ ಅಂಬೇಡ್ಕರ್ ಹುಟ್ಟಬೇಕು. ಶಿಕ್ಷಣದಲ್ಲಿ ನ್ಯಾಯ, ಸಮಾನತೆ ಹಾಗೂ ಗೌರವ ಸಿಗಬೇಕೆಂದರೆ ಸಮಾಜದ ಮನಸ್ಸುಗಳು ಬದಲಾಗಬೇಕು. ಬೆವರು ಬೆಸೆಯುವ ಸಂಸ್ಕೃತಿ ಹುಟ್ಟಬೇಕೆಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಈ ದೇಶ ಆಳುತ್ತಿರುವುದು ಈ ದೇಶದ ಸಂವಿಧಾನವೇ ಹೊರತು ಬೇರಾವ ನಾಯಕರಲ್ಲ. ದೇಶದ ಏಕತೆ ಹಾಗೂ ಸಂವಿಧಾನ ಉಳಿವಿಗಾಗಿ ಭಾರತೀಯರೆಲ್ಲರೂ ಒಂದುಗೂಡಬೇಕಾಗಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಪ್ರಥಮವಾಗಿ ಈ ಬಾರಿ ಎಲ್ಲಾ ಜಾತಿ, ಧರ್ಮದ ಜನರು ಒಟ್ಟಾಗಿ ಅಂಬೇಡ್ಕರ್ ಜಯಂತಿ ಆಚರಣೆ ನಡೆಸಿದ್ದೇವೆ. ಜಾತ್ಯಾತೀತ ಪರಂಪರೆಯನ್ನು ಇಲ್ಲಿಂದ ಪ್ರಾರಂಭವಾಗಿ ದೇಶಾಧ್ಯಂತ ಪಸರಿಸುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಿತಿ ಉಪಾಧ್ಯಕ್ಷರಾದ ಬಿ.ರುದ್ರಯ್ಯ, ಹಾಲಯ್ಯ, ಕೋಶಾದ್ಯಕ್ಷ ಸಿದ್ದೇಶ್ ಕೆಸವೊಳಲು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಕಾಫಿ ಬೆಳೆಗಾರ ಎಂ.ಪಿ.ಮನು, ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್ ಕುಮಾರ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಉದ್ಯಮಿ ಮಂಚೇಗೌಡ, ಎಂ.ಎಸ್.ಅನಂತ್, ಬ್ರಿಜೇಶ್ ಕಡಿದಾಳ್, ಸಿ.ಕೆ.ಇಬ್ರಾಹಿಂ, ಅಬ್ರಾರ್ ಅಹಮ್ಮದ್, ಯು.ಬಿ.ಮಂಜಯ್ಯ, ಎಲ್.ಬಿ.ರಮೇಶ್, ಬಿ.ಎಂ.ಶಂಕರ್, ಎಂ.ದೇಜಪ್ಪ, ಅಕ್ರಮ್ ಹಾಜಿ, ಸಾವಿತ್ರಿ ಮಹೇಂದ್ರ ಮೌರ್ಯ, ಸರೋಜ, ಆಶಾ ಸಂತೋಷ್, ಎಚ್.ಕೆ.ದೇವರಾಜ್, ಕ.ಕೆ.ಕೃಷ್ಣಪ್ಪ ಮತ್ತಿತರರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























