ಹಾಸನ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಟ ಯಶ್ ತಾಯಿ ಪುಷ್ಪ!

yash mother
10/01/2026

ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರಿಗೆ ಸೇರಿದ ಜಾಗದ ಕಾಂಪೌಂಡ್ ನೆಲಸಮ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಪುಷ್ಪ ಅವರು ಇಂದು ಹಾಸನ ಬಡಾವಣೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.

ಏನಿದು ಪ್ರಕರಣ? ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪ ಅವರಿಗೆ ಸೇರಿದ 1,500 ಅಡಿ ವಿಸ್ತೀರ್ಣದ ಸೈಟ್‌ನ ಕಾಂಪೌಂಡ್ ಅನ್ನು ಸುಮಾರು ಒಂದು ವಾರದ ಹಿಂದೆ ದೇವರಾಜ್ ಎಂಬುವವರು ಜೆಸಿಬಿ ಬಳಸಿ ನೆಲಸಮಗೊಳಿಸಿದ್ದರು. ಈ ಜಾಗ ಲಕ್ಷ್ಮಮ್ಮ ಎಂಬುವವರಿಗೆ ಸೇರಿದ್ದು, ತಾವು ಅದರ ಜಿಪಿಎ ಮಾಲೀಕರೆಂದು ಹಕ್ಕು ಸಾಧಿಸಿರುವ ದೇವರಾಜ್, ನ್ಯಾಯಾಲಯದ ಆದೇಶದ ಮೇರೆಗೆ ಕಾಂಪೌಂಡ್ ತೆರವುಗೊಳಿಸಿರುವುದಾಗಿ ಹೇಳಿಕೊಂಡಿದ್ದರು.

ಪೊಲೀಸ್ ಠಾಣೆಯಲ್ಲಿ ಪುಷ್ಪ ಹೇಳಿದ್ದೇನು? ಈ ಘಟನೆ ನಡೆದಾಗ ಪುಷ್ಪ ಅವರ ಸಂಬಂಧಿ ದುರ್ಗಾಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇಂದು ಸ್ವತಃ ಠಾಣೆಗೆ ಆಗಮಿಸಿದ ಪುಷ್ಪ ಅವರು, ತಮ್ಮ ದೂರಿನ ಪ್ರಗತಿಯ ಬಗ್ಗೆ ಪೊಲೀಸರನ್ನು ವಿಚಾರಿಸಿದರು.

 

“ನಾವು ಮನೆಯಲ್ಲಿ ಇಲ್ಲದ ಸಮಯ ನೋಡಿ ಅಕ್ರಮವಾಗಿ ಜೆಸಿಬಿ ನುಗ್ಗಿಸಿ ಕಾಂಪೌಂಡ್ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಕೈಗೊಂಡಿರುವ ಕ್ರಮವೇನು?” ಎಂದು ಅವರು ಪ್ರಶ್ನಿಸಿದ್ದಾರೆ. ಪುಷ್ಪ ಅವರ ಪರ ವಕೀಲರು ಮಾತನಾಡಿ, “ವಿವಾದಿತ ಸ್ಥಳ ಪುಷ್ಪ ಅವರಿಗೆ ಸೇರಿದ್ದು, ಯಾವುದೇ ಕೋರ್ಟ್ ಅನುಮತಿ ಇಲ್ಲದೆ ಕಾಂಪೌಂಡ್ ಕೆಡವಲಾಗಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ,” ಎಂದು ತಿಳಿಸಿದ್ದಾರೆ.  ಈ ಪ್ರಕರಣವು ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version