1:09 PM Thursday 16 - October 2025

ಪೊಲೀಸ್ ಎಂದು ತಿಳಿಯದೇ  ದರೋಡೆಗೆ ಮುಂದಾದ ಖದೀಮರು: ಸತ್ಯ ತಿಳಿದಾಗ ನಡೆದದ್ದೇನು?

robbery
07/07/2021

ಬೆಂಗಳೂರು:  ಅಮಾಯಕರ ದರೋಡೆ ನಡೆಸುತ್ತಿದ್ದ ಖದೀಮರು ಸಬ್ ಇನ್ಸ್ ಪೆಕ್ಟರ್ ರನ್ನೇ ದರೋಡೆ ಮಾಡಲು ಮುಂದಾಗಿದ್ದು, ಆದರೆ ಕೊನೆಯ ಕ್ಷಣದಲ್ಲಿ ಬೈಕ್ ನಲ್ಲಿರುವುದು ಪೊಲೀಸ್ ಎಂದು ತಿಳಿಯುತ್ತಿದ್ದಂತೆಯೇ ಗಾಬರಿಗೊಂಡು ಎದ್ದೂ ಬಿದ್ದು ಪರಾರಿಯಾಗಿರುವ ಘಟನೆ  ರಾಜಗೋಪಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಲು, ಆಶಿತ್ ಮತ್ತು ರವಿಕುಮಾರ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಇವರು ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಅಡಗಿ ಕೂತು, ಅಮಾಯಕರನ್ನು ದರೋಡೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದೇ ತಂಡ ಜುಲೈ 3ರಂದು ಆರ್.ಟಿ.ನಗರ  ಸಬ್ ಇನ್ಸ್ ಪೆಕ್ಟರ್ ಹೆಚ್.ಎಲ್.ಕೃಷ್ಣ ಅವರು ತಮ್ಮ ಕರ್ತವ್ಯ ಮುಗಿಸಿ ರಾತ್ರಿ 9:30ರ ವೇಳೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ದರೋಡೆಕೋರರ ತಂಡ ಅಡ್ಡಗಟ್ಟಿದೆ.
“ಏ ನಿನ್ನ ಹತ್ತಿರ ಏನಿದೆ? ತೆಗೆದುಕೊಡು” ಎನ್ನುತ್ತಾ ಮುಂದೆ ಬಂದ ದರೋಡೆಕೋರರು ಸಬ್ ಇನ್ಸ್ ಪೆಕ್ಟರ್ ಜೇಬಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಮುಂದೆ ಬಂದಿದ್ದು, ಈ ವೇಳೆ ಅವರ ಪೊಲೀಸ್ ಹೆಲ್ಮೆಟ್ ಕಂಡು ಬೆಚ್ಚಿಬಿದ್ದಿದ್ದು, ಏಕಾಏಕಿ ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಟಕ್ಕಿತ್ತಿದ್ದಾರೆ.

ಓಡುವ ಗಡಿಬಿಡಿಯಲ್ಲಿ ತಂಡದಲ್ಲಿದ್ದ ಮೂವರಲ್ಲಿ ಓರ್ವ ತನ್ನ ಬೈಕ್ ನ್ನು ಬಿಟ್ಟು ಓಡಿದ್ದಾನೆ. ಸಬ್ ಇನ್ಸ್ ಪೆಕ್ಟರ್ ಕೃಷ್ಣ ಅವರು ತಕ್ಷಣವೇ ದರೋಡೆಕೋರರ ಬೈಕ್ ನ್ನು ಠಾಣೆಗೆ ತಂದು ದೂರು ದಾಖಲಿಸಿದ್ದಾರೆ.

ಸ್ಕೂಟರ್ ನ ದಾಖಲೆಯ ಮೂಲಕ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ,  ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ, ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿರುವವರನ್ನು  ಗುರಿಯಾಗಿಸಿ ದರೋಡೆ ನಡೆಸುತ್ತಿದ್ದರು  ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ

Exit mobile version