12:06 PM Tuesday 27 - January 2026

ಪ್ರೇಯಸಿ ಹಾಗೂ ಆಕೆಯ ತಾಯಿಯ ಕತ್ತುಕೊಯ್ದು ಹತ್ಯೆ ಮಾಡಿದ ಪ್ರಿಯಕರ!

10/01/2021

ಬೆಂಗಳೂರು: ತನ್ನ ಪ್ರೇಯಸಿ ಹಾಗೂ ಆಕೆಯ ಅಮ್ಮನನ್ನು ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,  ಆರೋಪಿ ಪರಾರಿಯಾಗಿದ್ದಾನೆ.

ದೇವನಹಳ್ಳಿಯ ಬೈಚಾಪುರದ ನಿವಾಸಿ ಲಕ್ಷ್ಮೀದೇವಿ (50) ಮತ್ತು ಅವರ ಮಗಳು ರಮಾದೇವಿ (25) ಕೊಲೆಯಾದವರು. ಒರಿಸ್ಸಾ ಮೂಲದ ಮಲೈಕುಮಾರ್ ಫರೀದ್ ಹತ್ಯೆ ಆರೋಪಿಯಾಗಿದ್ದು, ರಮಾದೇವಿ ಹಾಗೂ ಆರೋಪಿ  ಪ್ರೀತಿಸುತ್ತಿದ್ದು, ಲಿವಿಂಗ್ ಟುಗೆದರ್ ನಲ್ಲಿದ್ದರು. ಈ ಕಾರಣದಿಂದಾಗಿ ಇವರಿಗೆ  ಒಂದು ಮಗು ಕೂಡ ಇದೆ.

ಲಕ್ಷ್ಮೀದೇವಿ ಅವರ ಪತಿ ಅಡುಗೆ ಭಟ್ಟ ವೃತ್ತಿ ಮತ್ತು ಮಗ ಲಾರಿ ಚಾಲಕ ವೃತ್ತಿ ಮಾಡುತ್ತಿದ್ದರು. ಮಗಳು ರಮಾದೇವಿ ಬ್ರಿಗೇಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು.ಈ ವೇಳೆ ಇದೇ ಅಪಾರ್ಟ್‍ಮೆಂಟ್‍ನಲ್ಲಿ ಎಂಜಿನಿಯರಿಂಗ್ ವರ್ಕ್ ಮಾಡುತ್ತಿದ್ದ ಒರಿಸ್ಸಾ ಮೂಲದ ಮಲೈಕುಮಾರ್ ಫರೀದ್ ಎಂಬಾತನ ಪರಿಚಯವಾಗಿದ್ದು, ಆ ಬಳಿಕ ಇಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರಿಗೆ ನಾಲ್ಕು ತಿಂಗಳ ಹಿಂದೆ ಒಂದು ಮಗು ಕೂಡ ಆಗಿದೆ. ಇದಾದ ಬಳಿಕ ಮಗುವಾದರೂ ಮಗಳನ್ನು ಯಾಕೆ ಇನ್ನೂ ಮದುವೆ ಆಗಿಲ್ಲ ಎಂದು ರಮಾದೇವಿ ಅವರ ತಾಯಿ ಲಕ್ಷ್ಮೀದೇವಿ  ಅವರು ಮಲೈಕುಮಾರ್ ಫರೀದ್ ನನ್ನು ಪ್ರಶ್ನಿಸುತ್ತಿದ್ದು, ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಮಲೈಕುಮಾರ್ ಫರೀದ್, ಲಕ್ಷ್ಮೀದೇವಿ ಅವರ ಪತಿ ಆಂಧ್ರ ಪ್ರದೇಶದ ಅನಂತಪುರಕ್ಕೆ ಹೋಗಿದ್ದ ಹಾಗೂ ಮಗ ಸಹ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಈ ಸಮಯವನ್ನು ಬಳಸಿಕೊಂಡು ಲಕ್ಷ್ಮೀ ದೇವಿಯ ಕೊಲೆಗೆ ಸಂಚು ರೂಪಿಸಿದ್ದಾನೆ. ಇಂದು ಮುಂಜಾನೆ 4 ಗಂಟೆ ಸುಮಾರಿನಲ್ಲಿ ನಿದ್ರಾವಸ್ಥೆಯಲ್ಲಿದ್ದ ಲಕ್ಷ್ಮೀದೇವಿ ಅವರ ಕತ್ತುಕೊಯ್ದು ಕೊಲೆ ಮಾಡಿದ್ದಾನೆ.

ಈ ವಿಚಾರವನ್ನು ಪತ್ನಿಗೆ ತಿಳಿಸಲು ಆಕೆಯನ್ನು ಮಲೈಕುಮಾರ್ ಕರೆದಿದ್ದು, ಈ ವೇಳೇ ತಾಯಿ ಕೊಲೆಯಾಗಿರುವುದನ್ನು ಕಂಡು ಆಕೆ ಕಿರುಚಿದ್ದು, ಈ ವೇಳೆ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ರಮಾದೇವಿಯ ಕತ್ತನ್ನೂ ಸೀಳಿ ಹತ್ಯೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ.

ದೇವನಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version