ಬಾವಿಗೆ ಹಾರಿದ ತಂಗಿಯನ್ನು ರಕ್ಷಿಸಲು ಹೋದ ಅಣ್ಣನೂ ಸಾವು..!

30/01/2024
ಚಿಂಚೋಳಿ(ಕಲಬುರಗಿ): ಬಾವಿಗೆ ಹಾರಿದ ತಂಗಿಯನ್ನು ರಕ್ಷಿಸಲು ಮುಂದಾದ ಅಣ್ಣನೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅಣ್ಣ ಸಂದೀಪ್(23) ಹಾಗೂ ತಂಗಿ ನಂದಿನಿ(19) ಸಾವನ್ನಪ್ಪಿದ್ದಾರೆ.
ನಂದಿನಿ ತುಂಬಾ ಹಠ ಸ್ವಭಾವ ಹೊಂದಿದ್ದಳು. ಸಣ್ಣ ಸಣ್ಣ ವಿಷಯಕ್ಕೂ ಹಠ ಮಾಡುತ್ತಿದ್ದಳು. ಪಿಯುಸಿ ಬಳಿಕ ಕಾಲೇಜು ನಿಲ್ಲಿಸಿದ್ದಳು. ಹೀಗಾಗಿ ಕಾಲೇಜಿಗೆ ಹೋಗುವಂತೆ ಮನೆಯವರು ಬುದ್ಧಿ ಹೇಳಿದ್ದರು.
ಕಾಲೇಜಿಗೆ ಹೋಗಲು ಆಕೆ ಕೇಳದಿದ್ದಾಗ ಭಾನುವಾರ ರಾತ್ರಿ ಮನೆಯಲ್ಲಿ ಜಗಳವಾಡಿದ್ದರು. ಈ ವೇಳೆ ಕೋಪಗೊಂಡ ನಂದಿನಿ ಮನೆಯ ಸಮೀಪದ ಬಾವಿಗೆ ಹಾರಿದ್ದಾಳೆ. ಆಕೆಯನ್ನು ರಕ್ಷಿಸಲು ಅಣ್ಣ ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ. ಇಬ್ಬರೂ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.