ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿಗೆ 59 ಸಾವಿರ ಅಂತರದ ಗೆಲುವು: ಮಹೇಶ್ ಗೆ ಹೀನಾಯ ಸೋಲು
ಚಾಮರಾಜನಗರ: ಧ್ರುವನಾರಾಯಣ ವಿರುದ್ಧ 1 ಮತದ ಅಂತರದಿಂದ ಸೋತ ಬಳಿಕ ನಿರಂತರವಾಗಿ ಸೋಲು ಅನುಭವಿಸಿದ್ದ ಎ.ಆರ್.ಕೃಷ್ಣಮೂರ್ತಿಗೆ ಕೊಳ್ಳೇಗಾಲದ ಮತದಾರರು ಭರ್ಜರಿ ಗೆಲುವನ್ನೇ ಕೊಟ್ಟಿದ್ದಾರೆ.
ಹೌದು…, ಹಾಲಿ ಬಿಜೆಪಿ ಶಾಸಕ ಎನ್.ಮಹೇಶ್ ವಿರುದ್ಧ ಎ.ಆರ್.ಕೃಷ್ಣಮೂರ್ತಿ ಬರೋಬ್ಬರಿ 59,519 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ನಿರಂತರ ಸೋಲಿಗೆ ಫುಲ್ ಸ್ಟಾಪ್ ಇಟ್ಟು ರಾಜಕೀಯದಲ್ಲಿ ಮತ್ತೇ ಮೇಲೆದಿದ್ದಾರೆ.
ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಎ.ಆರ್.ಕೆಗೆ ಈ ಗೆಲುವು ಹೊಸತನವನ್ನು ಕೊಟ್ಟಿದ್ದು 1 ಮತದ ಸೋಲನ್ನು ಈ ಭರ್ಜರಿ ಗೆಲುವು ಮರೆಸಿದೆ.
ಮಹೇಶ್ ಗೆ ಹೀನಾಯ ಸೋಲು:
ಜಿಲ್ಲೆಯಲ್ಲಿ ಅಧಿಕ ಮತಗಳ ಅಂತರದಿಂದ ಸೋಲುಂಡ ಶಾಸಕರಾಗಿ ಮಹೇಶ್ ಇದ್ದು ಭರ್ತಿ 59 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿದ್ದಾರೆ. ಬಿಎಸ್ಪಿ ಇಂದ ಬಿಜೆಪಿಗೆ ತೆರಳಿದ ಬಳಿಕ ತಾಲೂಕಿನಲ್ಲಿ ಉಂಟಾದ ವಿರೋಧ ಮತಪೆಟ್ಟಿಗೆಯಲ್ಲಿ ತೋರಿದೆ.
ಎ.ಆರ್.ಕೃಷ್ಣಮೂರ್ತಿಗೆ ಅನುಕಂಪ, ಬಿಎಸ್ಪಿ ಬೆಂಬಲ, ಕಾಂಗ್ರೆಸ್ ಗೆ ಹಲವರ ಸೇರ್ಪಡೆ ಕೈ ಗೆಲುವಿಗೆ ಸಹಕಾರವಾಗಿದ್ದು ಮಹೇಶ್ ಅವರಿಗೆ ವ್ಯಾಪಕ ಆಡಳಿತ ವಿರೋಧಿ ನೀತಿ ಮತ ಪೆಟ್ಟಿಗೆಯಲ್ಲಿ ಕೆಲಸ ಮಾಡಿದೆ.
ಫೈಟ್ ಕೊಡದ ಪೊಲೀಸ್ ಇನ್ಸ್ಪೆಕ್ಟರ್:
ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಧುಮುಕಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಬಿ.ಪುಟ್ಟಸ್ವಾಮಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ಸವಾಲು ಒಡ್ಡಿಲ್ಲ. ಕೇವಲ 3925 ಮತಗಳಿಗಷ್ಟೇ ತೃಪ್ತಿಪಟ್ಟುಕೊಂಡಿದ್ದಾರೆ.
ಅಂತರ ಮುಖ್ಯವಲ್ಲ: ಗೆಲುವು ಮುಖ್ಯ:
1 ಮತದ ಅಂತರದಿಂದ ಸೋತ ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ ಎಂದು ಕೊಳ್ಳೇಗಾಲದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಹೇಳಿದ್ದಾರೆ.
1 ಮತದ ಅಂತರದಿಂದ ಸೋತಿದ್ದೆ ಆದರೀಗ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದೇನೆ, ನನಗೆ ಅಂತರ ಮುಖ್ಯವಲ್ಲ, ಗೆಲುವು ಮುಖ್ಯ, ಸಿದ್ದರಾಮಯ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳು, ನನ್ನ ಮೇಲಿದ್ದ ಜನರ ವಿಶ್ವಾಸ, ಪಕ್ಷದ ಸಂಘಟನೆಯಿಂದ ಈ ಬಾರಿ ಗೆದ್ದಿದ್ದೇನೆ ಎಂದಿದ್ದಾರೆ.
ಪಡೆದ ಮತಗಳು:
ಕಾಂಗ್ರೆಸ್- ಎ.ಆರ್.ಕೃಷ್ಣಮೂರ್ತಿ- 108363
ಬಿಜೆಪಿ- ಎನ್.ಮಹೇಶ್- 48844
ನೋಟಾ- 1671
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























