ಪಪ್ಪಾ… ಎಂಬ ಅವಳ ಕೂಗು ಕೊನೆಯದ್ದಾಗಿತ್ತು: ಕೊನೆಗೆ ಸಿಕ್ಕಿದ್ದು ಅವಳ ಶವ ಮಾತ್ರ: 10 ವರ್ಷದ ಬಾಲಕಿಯ ದುರಂತ ಸಾವು
ನವದೆಹಲಿ: ಬಿಹಾರದಿಂದ ಬದುಕನ್ನು ಹುಡುಕಿಕೊಂಡು ದೇಶದ ರಾಜಧಾನಿ ದೆಹಲಿಗೆ ಬಂದಿದ್ದ ಬಡ ಕುಟುಂಬವೊಂದರ ಹತ್ತು ವರ್ಷದ ಹೆಣ್ಣು ಮಗಳು ಕಣ್ಣೆದುರೇ ಅಪಹರಣವಾಗಿ, ಕೊನೆಯಲ್ಲಿ ಹೆಣವಾಗಿ ಪತ್ತೆಯಾಗಿರುವ ಅತ್ಯಂತ ದಾರುಣ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
“ನಾನು ಗಾಢ ನಿದ್ರೆಯಲ್ಲಿದ್ದೆ. ಇದ್ದಕ್ಕಿದ್ದಂತೆ ನನ್ನ ಮಗಳು ‘ಪಪ್ಪಾ…’ ಎಂದು ಜೋರಾಗಿ ಕಿರುಚಿದ ಆ ಒಂದು ಶಬ್ದಕ್ಕೆ ನನಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಅಪರಿಚಿತರು ಆಕೆಯನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಳ್ಳುತ್ತಿದ್ದರು. ನಾನು ತಕ್ಷಣ ಕೈಗೆ ಸಿಕ್ಕ ಕಡ್ಡಿಯನ್ನು ಹಿಡಿದು ಕಾರಿನ ಹಿಂದೆ ಓಡಿದೆ. ಆದರೆ ಕೇವಲ ಒಂದೇ ನಿಮಿಷದಲ್ಲಿ ಆ ಕಾರು ವೇಗವಾಗಿ ಅಲ್ಲಿಂದ ಪರಾರಿಯಾಯಿತು” ಎಂದು ಮೃತ ಬಾಲಕಿಯ ತಂದೆ ದಕ್ಷಿಣ ದೆಹಲಿಯ ಆಸ್ಪತ್ರೆಯ ಶವಾಗಾರದ ಮುಂದೆ ಕಣ್ಣೀರು ಹಾಕುತ್ತಾ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಘಟನೆಯನ್ನು ವಿವರಿಸಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಈ ಬಡ ಕುಟುಂಬ ಬಿಹಾರದ ತಮ್ಮ ಗ್ರಾಮದಿಂದ ದೆಹಲಿಗೆ ವಲಸೆ ಬಂದಿತ್ತು. ತಂದೆ–ತಾಯಿ ಇಬ್ಬರೂ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಬಾಡಿಗೆ ಕೋಣೆಯಲ್ಲಿದ್ದ ಇವರು, ನಂತರ ಹಣಕಾಸಿನ ಮುಗ್ಗಟ್ಟಿನಿಂದಾಗಿ ಬಾಡಿಗೆ ಕಟ್ಟಲಾಗದೆ ಕೋಣೆ ಖಾಲಿ ಮಾಡಬೇಕಾಯಿತು. ಬೇರೆ ದಾರಿಯಿಲ್ಲದೆ ದಕ್ಷಿಣ ದೆಹಲಿಯ ರಸ್ತೆ ಬದಿಯ ಫುಟ್ಪಾತ್ (ಪಾದಚಾರಿ ಮಾರ್ಗ) ಮೇಲೆಯೇ ಈ ಕುಟುಂಬ ವಾಸವಾಗಿತ್ತು. ತಂದೆ–ತಾಯಿ ಕೆಲಸಕ್ಕೆ ಹೋದಾಗ ಈ 10 ವರ್ಷದ ಬಾಲಕಿಯೇ ತನ್ನ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳುತ್ತಿದ್ದಳು.
ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿರುವ ತಂದೆ, “ನನ್ನ ಮಗಳಿಗೆ ಓದುವುದೆಂದರೆ ತುಂಬಾ ಆಸೆಯಿತ್ತು. ಅಗತ್ಯ ದಾಖಲೆಗಳಿಲ್ಲದ ಕಾರಣ ಆಕೆಯನ್ನು ಶಾಲೆಗೆ ಸೇರಿಸಲು ತುಂಬಾ ಕಷ್ಟಪಡಬೇಕಾಯಿತು. ಕಷ್ಟಪಟ್ಟು ದಾಖಲೆಗಳನ್ನು ಮಾಡಿಸಿ, ಇತ್ತೀಚೆಗಷ್ಟೇ ದೆಹಲಿಯ ಸರ್ಕಾರಿ ಶಾಲೆಗೆ ಆಕೆಯನ್ನು ದಾಖಲಿಸಿದ್ದೆ. ಶಾಲೆಗೆ ಹೋಗಲು ಅವಳು ತುಂಬಾನೇ ಉತ್ಸುಕಳಾಗಿದ್ದಳು. ಆದರೆ ವಿಧಿಯ ಆಟ ಬೇರೆಯೇ ಇತ್ತು” ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಇನ್ನೂ ಹಲವಾರು ನಿರಾಶ್ರಿತ ಕುಟುಂಬಗಳು ತಾತ್ಕಾಲಿಕ ಶೆಡ್ಗಳನ್ನು ಹಾಕಿಕೊಂಡು ಫುಟ್ ಪಾತ್ ಮೇಲೆ ವಾಸಿಸುತ್ತಿರುವುದು ಕಂಡುಬಂದಿದೆ. ಅಲ್ಲಿನ ಸ್ಥಳೀಯ ಸೆಕ್ಯೂರಿಟಿ ಗಾರ್ಡ್ ಒಬ್ಬರು ಮಾತನಾಡಿ, “ಈ ರಸ್ತೆ ಬದಿಯ ಪ್ರದೇಶವು ರಾತ್ರಿಯ ವೇಳೆಯಲ್ಲಿ ನಿರಾಶ್ರಿತ ಮಹಿಳೆಯರು ಮತ್ತು ಮಕ್ಕಳಿಗೆ ತೀರಾ ಅಸುರಕ್ಷಿತವಾಗಿದೆ. ಕುಡುಕರು ಮತ್ತು ಡ್ರಗ್ಸ್ ವ್ಯಸನಿಗಳು ಇಲ್ಲಿ ನಿರಂತರವಾಗಿ ಓಡಾಡುತ್ತಿರುತ್ತಾರೆ ಮತ್ತು ರಸ್ತೆ ಬದಿಯಲ್ಲಿ ಮಲಗುವವರನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಪೀಡಿಸುತ್ತಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಸದ್ಯ ಬಾಲಕಿಯ ಶವವನ್ನು ವಶಪಡಿಸಿಕೊಂಡಿದ್ದು, ತಂದೆ ನೀಡಿದ ಗುರುತಿನ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ. ಕಾರಿನಲ್ಲಿದ್ದ ಅಪಹರಣಕಾರರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























