ಧರ್ಮಸ್ಥಳ ಬುರುಡೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರಕ್ಕೆ ಕಾಲವೇ ತಕ್ಕ ಶಾಸ್ತಿ ಮಾಡಿದೆ: ಆರ್. ಅಶೋಕ್ ಆಕ್ರೋಶ

dharmastala case
13/06/2026

ಬೆಂಗಳೂರು: ಕೋಟಿ ಕೋಟಿ ಭಕ್ತರ ಪವಿತ್ರ ಶ್ರದ್ಧಾ ಕೇಂದ್ರವಾದ ‘ಶ್ರೀ ಕ್ಷೇತ್ರ ಧರ್ಮಸ್ಥಳ’ದ ವಿರುದ್ಧ ನಡೆದ ಮಹಾ ಷಡ್ಯಂತ್ರ ಅಂತಿಮವಾಗಿ ಧೂಳೀಪಟವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, “ಸತ್ಯಕ್ಕೆ ಸಾವಿಲ್ಲ, ಸನಾತನ ಧರ್ಮವನ್ನು ಕೆಣಕಿದವರಿಗೆ ಉಳಿಗಾಲವಿಲ್ಲ. ಧರ್ಮದ ನೆಲೆಗಟ್ಟನ್ನು ಅಲ್ಲಾಡಿಸಲು ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಲವೇ ತಕ್ಕ ಶಾಸ್ತಿ ಮಾಡಿದೆ,” ಎಂದು ಕಿಡಿಕಾರಿದ್ದಾರೆ.

200 ಕೋಟಿ ರೂ. ಬ್ರಹ್ಮಾಂಡ ಷಡ್ಯಂತ್ರ:

“ಕಾಂಗ್ರೆಸ್ ಸರ್ಕಾರದ ಎಡಪಂಥೀಯ ಪಟಾಲಂ ಹಣೆದಿದ್ದ ನೀಚ ಸಂಚು ಇಂದು ನಡುರಸ್ತೆಯಲ್ಲಿ ಬೆತ್ತಲಾಗಿದೆ. ಮುಸುಕುಧಾರಿ ಚಿನ್ನಯ್ಯ ಎಂಬ ಅಯೋಗ್ಯನನ್ನು ಮುಂದಿಟ್ಟುಕೊಂಡು, ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ಹಚ್ಚಲು ಕಾಂಗ್ರೆಸ್ ಹೆಣೆದಿದ್ದ 200 ಕೋಟಿ ರೂಪಾಯಿಗಳ ಬ್ರಹ್ಮಾಂಡ ಷಡ್ಯಂತ್ರದ ಮುಖವಾಡ ಇಂದು ಕಳಚಿ ಬಿದ್ದಿದೆ,” ಎಂದು ಅಶೋಕ್ ಆರೋಪಿಸಿದ್ದಾರೆ.

ಅಂದು ಸತ್ಯದ ಪರ ನಿಲ್ಲಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಬುರುಡೆ ದಾಸನಿಗೆ ರೆಡ್ ಕಾರ್ಪೆಟ್ ಹಾಸಿ ವೈಭವೀಕರಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಈ ಸಂಚಿನ ಬಗ್ಗೆ ಮುಸುಕುಧಾರಿ ಚಿನ್ನಯ್ಯ ಹೈಕೋರ್ಟ್ ಮುಂದೆ ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟಿದ್ದಾನೆ. ಇದರಲ್ಲಿ ನಟ ಪ್ರಕಾಶ್ ರಾಜ್ ಪಾತ್ರವೂ ಇರುವುದು ಬೆಳಕಿಗೆ ಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಬಿಜೆಪಿ ಹೋರಾಟಕ್ಕೆ ಜಯ:

“ಅಂದು ಈ ಸನಾತನ ವಿರೋಧಿ ನೀತಿಯನ್ನು ಖಂಡಿಸಿ, ಧರ್ಮ ರಕ್ಷಣೆಗಾಗಿ ಬಿಜೆಪಿ ‘ಧರ್ಮಸ್ಥಳ ಚಲೋ’ ನಡೆಸಿ ಸರ್ಕಾರಕ್ಕೆ ಎಚ್ಚರಿಸಿತ್ತು. ಇಂದು ಆ ಹೋರಾಟಕ್ಕೆ ಜಯ ಸಿಕ್ಕಿದೆ, ಸತ್ಯ ಸೂರ್ಯನಂತೆ ಹೊರಬಂದಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವಕ್ಕೆ, ಧರ್ಮಸ್ಥಳದ ಘನತೆಗೆ ಮಸಿ ಬಳಿಯಲು ಯತ್ನಿಸಿದ ಕಾಂಗ್ರೆಸ್ ಸರ್ಕಾರ ತಕ್ಷಣ ಕರ್ನಾಟಕದ ಜನತೆಯ ಬಹಿರಂಗ ಕ್ಷಮೆಯಾಚಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಈ ಇಡೀ ಕೃತ್ಯದ ಹಿಂದಿರುವ ಸೂತ್ರಧಾರಿಗಳನ್ನು ಕಂಬಿ ಹಿಂದೆ ತಳ್ಳುವವರೆಗೂ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version