ಕಾಫಿನಾಡಿನ ‘ನಕಲಿ’ ಐಎಎಸ್ ಅಧಿಕಾರಿ ಪೊಲೀಸರ ಬಲೆಗೆ: 2 ಕೋಟಿ ರೂ. ವಂಚಿಸಿದ್ದ ಕಿಲಾಡಿ ಅರೆಸ್ಟ್!
ಬೆಂಗಳೂರು: ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಉತ್ತರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಮೂಲದ ಮಿಥುನ್ ಬಂಧಿತ ಆರೋಪಿ.
ಆರೋಪಿ ಮಿಥುನ್ ತಾನು ಐಎಎಸ್ ಅಧಿಕಾರಿ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಅಷ್ಟೇ ಅಲ್ಲದೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಹಿರಿಯ ಅಧಿಕಾರಿಯಂತೆ ನಟಿಸುತ್ತಾ ಮೆಡಿಕಲ್ ಸಪ್ಲೈ (ವೈದ್ಯಕೀಯ ಉಪಕರಣಗಳ ಪೂರೈಕೆ) ಹೆಸರಿನಲ್ಲಿ ಹಲವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಈತ ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಎಸಗಿದ್ದಾನೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬೆಂಗಳೂರಿನ ಲಾಡ್ಜ್ ಒಂದರಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಿಥುನ್ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿ ಮುಖವಾಡ ಕಳಚಿದೆ. ನಕಲಿ ಐಡಿ ಕಾರ್ಡ್ ಮತ್ತು ದಾಖಲೆಗಳನ್ನು ಬಳಸಿ ಅಧಿಕಾರಿಗಳನ್ನೇ ನಂಬಿಸುವಲ್ಲಿ ಈತ ಯಶಸ್ವಿಯಾಗಿದ್ದ.
ಚಿಕ್ಕಮಗಳೂರಿನಲ್ಲೂ ಸಭೆ ನಡೆಸಿದ್ದ ನಕಲಿ ಅಧಿಕಾರಿ!
ವಂಚಕ ಮಿಥುನ್ ಎಷ್ಟರ ಮಟ್ಟಿಗೆ ಧೈರ್ಯ ಪ್ರದರ್ಶಿಸಿದ್ದನೆಂದರೆ, ಚಿಕ್ಕಮಗಳೂರಿನಲ್ಲಿ ಸ್ವತಃ ತಾನೊಬ್ಬ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ವೈದ್ಯರು ಮತ್ತು ನರ್ಸ್ಗಳ ಜೊತೆ ಅಧಿಕೃತ ಸಭೆ ನಡೆಸಿದ್ದ ಎನ್ನಲಾಗಿದೆ. ಈತನ ಗಾಂಭೀರ್ಯ ಮತ್ತು ನಕಲಿ ದಾಖಲೆಗಳನ್ನು ಕಂಡು ನಿಜವಾದ ಅಧಿಕಾರಿಗಳೂ ದಪ್ಪೆ ಹಾಕುವಂತಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























