1:02 AM Wednesday 27 - August 2025

ಶುಭ: ಮುಂದಿನ ವರ್ಷ ಅಯೋಧ್ಯೆಯಲ್ಲಿ ಮಸೀದಿಗೆ ಶಿಲಾನ್ಯಾಸ: ಹೇಗಿರುತ್ತೆ ಗೊತ್ತಾ ಮಸೀದಿ ನೋಟ..?

16/12/2023

ಅಯೋಧ್ಯೆಯಲ್ಲಿನ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಗೆ ಮುಂದಿನ ವರ್ಷ ಶಂಕುಸ್ಥಾಪನೆ ನೆರವೇರಲಿದೆ. ಈ ಸಮಾರಂಭಕ್ಕೆ ಸಾಧು ಸಂತರು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗುತ್ತದೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಈ ಕುರಿತು ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫತ್ ಶೇಖ್ ಮಾಹಿತಿ ನೀಡುತ್ತಾ, ಮುಂದಿನ ಐದಾರು ವರ್ಷಗಳಲ್ಲಿ ಮಸೀದಿ ನಿರ್ಮಾಣ ಪೂರ್ಣಗೊಂಡಾಗ ಮೆಕ್ಕಾ ಮಸೀದಿಯಲ್ಲಿ ನಮಾಜ್‌ನ ನೇತೃತ್ವ ವಹಿಸುವ ಇಮಾಮ್-ಎ-ಹರಾಮ್ ಸೇರಿದಂತೆ ಎಲ್ಲಾ ದೇಶಗಳ ಉನ್ನತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದರು.

ಇನ್ನು ಈ ಕುರಿತು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಶೇಖ್ ಮಾತನಾಡಿ, ಮಸೀದಿಯು ಸಾಂಪ್ರದಾಯಿಕ ತಾಜ್ ಮಹಲ್‌ಗಿಂತ ಹೆಚ್ಚು ಸುಂದರವಾಗಿರಲಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಶಂಕುಸ್ಥಾಪನೆಗಾಗಿ ದೇಶಾದ್ಯಂತ ಸಾಧು- ಸಂತರು ಮತ್ತು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿರುವ ಧನ್ನಿಪುರದಲ್ಲಿ ಪ್ರವಾದಿಯವರ ಹೆಸರಿನಲ್ಲಿ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಯನ್ನು ನಿರ್ಮಿಸಲಾಗುತ್ತಿದೆ.
ಮಸೀದಿಯ ಜೊತೆಗೆ, ದಂತವೈದ್ಯಶಾಸ್ತ್ರ, ಕಾನೂನು, ವಾಸ್ತುಶಿಲ್ಪ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಂತಹ ವಿವಿಧ ವಿಷಯಗಳಿಗೆ ಮೀಸಲಾದ ಕಾಲೇಜುಗಳನ್ನು ಮಸೀದಿ ಅಭಿವೃದ್ಧಿ ಸಮಿತಿಯು ಅಲ್ಲಿ ಅಭಿವೃದ್ಧಿಪಡಿಸುತ್ತಿದೆ. ಹೆಚ್ಚುವರಿಯಾಗಿ, ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಸೇರಿದಂತೆ ಎರಡು ಆಸ್ಪತ್ರೆಗಳು ಬರಲಿವೆ. ಎಲ್ಲಾ ಧರ್ಮದ ಜನರಿಗಾಗಿ ಸಸ್ಯಾಹಾರಿ ಸಮುದಾಯ ಕೇಂದ್ರವನ್ನು ಸಹ ನಿರ್ಮಿಸಲಾಗುವುದು ಎಂದು ಶೇಖ್ ಹೇಳಿದರು.

ಅಯೋಧ್ಯೆ ರಾಮ ಮಂದಿರ ವಿವಾದದಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರಿಗೆ ಅಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ನೀಡಿದೆ.

ಇತ್ತೀಚಿನ ಸುದ್ದಿ

Exit mobile version