ಬಜ್ಪೆಯಲ್ಲಿ ಬೃಹತ್ ಮಾನವ ಸರಪಳಿ: ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಲು ಹೋರಾಟ ಸಮಿತಿ ಒತ್ತಾಯ

bajpe.jpg
08/07/2026

ಬಜ್ಪೆ: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಸರಕಾರದ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಬಡವರ ಆರೋಗ್ಯ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬಜ್ಪೆ ಪೇಟೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ತೀವ್ರ ಪ್ರತಿಭಟನೆ ನಡೆಸಿದವು.

ಪ್ರಮುಖ ಬೇಡಿಕೆಗಳು:

  • ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಆದೇಶವನ್ನು ಹಿಂಪಡೆಯಬೇಕು.
  • ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಜಯದೇವ ಹೃದಯ ರೋಗ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು.
  • ಕೈಗಾರಿಕಾ ಪಟ್ಟಣವಾದ ಬಜ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (PHC) ತಕ್ಷಣವೇ ಸಮುದಾಯ ಆಸ್ಪತ್ರೆಯಾಗಿ (Community Hospital) ಮೇಲ್ದರ್ಜೆಗೆ ಏರಿಸಬೇಕು.

ಜನಪ್ರತಿನಿಧಿಗಳು ಕಾರ್ಪೊರೇಟ್ ವೈದ್ಯಕೀಯ ಲಾಬಿಯ ಸೂತ್ರದ ಗೊಂಬೆಗಳು: ಮುನೀರ್ ಕಾಟಿಪಳ್ಳ ಆರೋಪ

ಮಾನವ ಸರಪಳಿಗೆ ಮುನ್ನ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸರಕಾರದ ಧೋರಣೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

“ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದರೆ, ಸರಕಾರ ಮಾತ್ರ ಮತ್ತೆ 3 ಹೊಸ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಿದೆ. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು, ಅವುಗಳನ್ನು ಖಾಸಗಿ ಸಂಸ್ಥೆಗಳಿಗೆ ಧಾರೆ ಎರೆಯುವ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಸರಕಾರಿ ಆಸ್ಪತ್ರೆಗಳ ಬಗ್ಗೆ ಕಾಳಜಿ ಇಲ್ಲ, ಅವರು ಖಾಸಗಿ ಕಾಲೇಜುಗಳ ಬೇಡಿಕೆ ಈಡೇರಿಸಲು ನಿಂತಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲೆಯ ಶಾಸಕರುಗಳು ಪಕ್ಷಾತೀತವಾಗಿ ವಿಧಾನಸಭೆಯಲ್ಲಿ ಕಂಬಳ, ಕೋಳಿ ಅಂಕದ ಬಗ್ಗೆ ಧ್ವನಿ ಎತ್ತುತ್ತಾರೆಯೇ ಹೊರತು, ಆಸ್ಪತ್ರೆಗಳ ದುಸ್ಥಿತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಇವರೆಲ್ಲರೂ ಕಾರ್ಪೊರೇಟ್ ವೈದ್ಯಕೀಯ ಲಾಬಿಯ ಸೂತ್ರದ ಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಬಡವರ ಆರೋಗ್ಯದ ಹಕ್ಕಿಗೆ ಧಕ್ಕೆ: ಕೃಷ್ಣಾನಂದ ಡಿ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ. ಮಾತನಾಡಿ, “ಸರಕಾರಿ ಆಸ್ಪತ್ರೆಗಳು ಖಾಸಗಿಯವರ ಪಾಲಾದರೆ ಬಡವರು ಮತ್ತು ಶ್ರಮಿಕ ವರ್ಗದವರು ಆರೋಗ್ಯದ ಹಕ್ಕಿನಿಂದ ಸಂಪೂರ್ಣ ವಂಚಿತರಾಗಲಿದ್ದಾರೆ. ಸಚಿವರು ತಕ್ಷಣವೇ ಈ ನಿರ್ಧಾರ ಕೈ ಬಿಡಬೇಕು, ಇಲ್ಲದಿದ್ದರೆ ಹೋರಾಟ ಗಂಭೀರ ಸ್ವರೂಪ ಪಡೆಯಲಿದೆ. ಬಜ್ಪೆಯಲ್ಲಿ ಸಮುದಾಯ ಆಸ್ಪತ್ರೆ ಸ್ಥಾಪನೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದು ಎಚ್ಚರಿಸಿದರು.ಸಭೆಯಲ್ಲಿ ದಸಂಸ ಮಾಜಿ ಜಿಲ್ಲಾ ಸಂಚಾಲಕ ರಘು ಎಕ್ಕಾರು ಹಾಗೂ ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯ ಸಿರಾಜ್ ಬಜ್ಪೆ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಿಪಿಐಎಂನ ಸದಾಶಿವ ದಾಸ್, ವಸಂತಿ ಕುಪ್ಪೆಪದವು, ಡಿವೈಎಫ್ ಐ ಮುಖಂಡ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ, ಸಿಲ್ವಿಯಾ ಜೋಕಟ್ಟೆ, ಬಜ್ಪೆ ಚರ್ಚ್ನ ಜಾನ್ ಪೀಟರ್ ಡಿಸೋಜ, ಸ್ಟಾನಿ ರೋಡ್ರಿಗ್ರಸ್, ಆಮ್ ಆದ್ಮಿ ಪಕ್ಷದ ರಾಬರ್ಟ್ ರೇಗೊ, ಪ್ರಮುಖರಾದ ಶ್ರೀನಾಥ್ ಕುಲಾಲ್, ಮಂಜಪ್ಪ ಪುತ್ರನ್, ಖಾದರ್ ಇಡ್ಮಾ, ಬಾವಾ ಪದರಂಗಿ, ಬಾಬು ಸಾಲ್ಯಾನ್ ತಿರುವೈಲು, ನೋಣಯ್ಯ ಗೌಡ, ಹಸೈನಾರ್ ಜೋಕಟ್ಟೆ, ನಾಗೇಶ್ ಚಿಲಿಂಬಿ, ರಾಜಯ್ಯ ಮಂಗಳೂರು, ರುಕ್ಕಯ್ಯ ಕರಂಬಾರು, ಪಟ್ಟಣ ಪಂಚಾಯತ್ ಸದಸ್ಯೆ ವೀಣಾ ಹಾಗೂ ನ್ಯಾಯವಾದಿ ವಿನೋದರ ಪೂಜಾರಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ

Exit mobile version