ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಕಾದು ಕಾದು ಸ್ವಂತ ಹಣದಲ್ಲಿ ಹಣೆಮಣೆ ಏರಿದ 7 ಜೋಡಿ!!

chamarajanagara1
29/08/2023

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಇನ್ನೂ ಮುಹೂರ್ತ ಕೂಡಿಬರದ ಕಾರಣ ಬೇಸತ್ತ 7 ಜೋಡಿಗಳು ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.

ಹೌದು…, ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿದ ಕಾರಣ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ 7 ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆ. 23 ರಂದು ಸಾಮೂಹಿಕ ವಿವಾಹ ನಿಗದಿಯಾಗಿತ್ತು. ಆದರೆ, ಈ ದಿನಾಂಕ ಮುಂದೂಡಿಕೆಯಾಗಿ ಬಳಿಕ ಆ. 28 ರಂದು ನಿಗದಿಯಾಗಿತ್ತು. ಈಗ ಆ.28 ರ ಸಾಮೂಹಿಕ ವಿವಾಹ ಮತ್ತೆ ಮುಂದೂಡಿಕೆಯಾಗಿದ್ದು ಭಕ್ತರು ಬೇಸರ ಹೊರಹಾಕಿದ್ದಾರೆ.

ಮಲೆಮಾದಪ್ಪನ ಸನ್ನಿಧಿಯಲ್ಲಿ ಮದ್ವೆಯಾದ್ರೆ ಶುಭ ಎಂಬ ನಂಬಿಕೆ ಹಿನ್ನೆಲೆ ಈಗಾಗಲೇ 67 ಜೋಡಿಗಳ ನೋಂದಣಿ ಮಾಡಿಕೊಂಡಿದ್ದರು. ಆದರೆ ಈಗ ಎರಡು ಬಾರಿ ಮುಂದೂಡಿದ್ದಕ್ಕೆ ಬೇಸರಹೊಂದಿ ಸಾಲೂರು ಮಠದಲ್ಲಿ ಸ್ವಂತ ದುಡ್ಡಿನಲ್ಲಿ ಸೋಮವಾರ 7 ಜೋಡಿಗಳು ಮದುವೆಯಾಗಿದ್ದಾರೆ.

ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮ.ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ೨ ಬಾರಿ ವಿವಾಹ ಮುಂದೂಡಿಕೆಯಾಗಿದ್ದ ಹಿನ್ನಲೆ ಬೇಸತ್ತ ಚಾಮರಾಜನಗರದ ಜಗದೀಶ್ ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್ಕುಮಾರ್ – ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯಕುಮಾರ್ – ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ – ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ – ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್ — ಸೌಭಾಗ್ಯ ಹಾಗೂ ಚಾಮರಾಜನಗರದ ರವಿ – ಸೌಮ್ಯ ಜೋಡಿಗಳು ಸಾಲೂರು ಬೃಹನ್ಮಠದಲ್ಲಿ ವಿವಾಹವಾಗಿದ್ದಾರೆ.

ಪ್ರಾಧಿಕಾರದ ಕಾರ್ಯದರ್ಶಿ ಪ್ರತಿಕ್ರಿಯೆ:

ಇನ್ಮುಂದೆ ಪೋಸ್ಟ್ಪೋನ್ ಮಾಡಲ್ಲ, ಕೆಲವರ ದಾಖಲಾತಿ ಸರಿಪಡಿಸುವಿಕೆ ಹಾಗೈ ಉಸ್ತುವಾರಿ ಸಚಿವರ ಸಮಯಕ್ಕಾಗಿ ಕಾಯುತ್ತಿದ್ದೇವೆ, ಸೆ. 3 ಅಥವಾ 6ರಂದು ಸಚಿವರು ಬರುವುದಾಗಿ ಹೇಳಿದ್ದು, ಈ ಬಾರಿ ಸಾಮೂಹಿಕ ವಿವಾಹ ಖಂಡಿತ ನೆರವೇರುತ್ತೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹೇಳಿದ್ದಾರೆ.
ಒಟ್ಟಿನಲ್ಲಿ ಸಚಿವರ ಸಮಯಕ್ಕಾಗಿ ಸಾಮೂಹಿಕ ವಿವಾಹವನ್ನೇ ಪ್ರಾಧಿಕಾರ ಮುಂದೂಡಿಕೆ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು ಒಂದಲ್ಲ ಎರಡು ಬಾರಿ ಶುಭ ಕಾರ್ಯ ಮುಂದೂಡಿರುವುದು ವಿಪರ್ಯಾಸವಾಗಿದೆ.

ಇತ್ತೀಚಿನ ಸುದ್ದಿ

Exit mobile version