11:50 PM Wednesday 29 - April 2026

ನಮಗೆ ಯಡಿಯೂರಪ್ಪ ಸರ್ಕಾರ ಉರುಳಿಸುವುದಕ್ಕಿಂತಲೂ ಪಕ್ಷ ಕಟ್ಟುವುದು ಮುಖ್ಯ | ದೇವೇಗೌಡ

07/01/2021

ಬೆಂಗಳೂರು: ನನಗೆ ಪಕ್ಷ ಕಟ್ಟುವುದು ಮುಖ್ಯವೇ ಹೊರತು ಸರ್ಕಾರ ಉರುಳಿಸುವುದು ಮುಖ್ಯವಲ್ಲ. ನಮ್ಮ ಸರ್ಕಾರ ಬಿದ್ದ ಮೇಲೆ ಯಡಿಯೂರಪ್ಪ ಸರ್ಕಾರ ಬೀಳಿಸುತ್ತೇವೆ ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು,  ಜೆಡಿಎಸ್ ಗೆ ಯಡಿಯೂರಪ್ಪ ಸರ್ಕಾರದ ಬಗ್ಗೆ ಚರ್ಚೆ ಅನಗತ್ಯ.  ಅದರ ಬಗ್ಗೆ ಮಾತನಾಡಲು ಹಲವರಿದ್ದಾರೆ. ನಮಗೆ ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆ ಮುಖ್ಯ. ಅದರ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ಕರೆ ನೀಡಿದರು.

ಗ್ರಾ.ಪಂ ಚುನಾವಣೆಯಲ್ಲಿ ನಾವು ಮೂರನೇ ಸ್ಥಾನ ಪಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಕಾಂಗ್ರೆಸ್ ಸಮೀಪದಲ್ಲೇ ಇದ್ದೇವೆ. ನಮ್ಮ ನಡುವೆ ಎರಡ್ಮೂರು ಸಾವಿರ ಅಂತರ ಇರಬಹುದು ಅಷ್ಟೇ.  ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಕಾರ್ಯಕರ್ತರಿದ್ದಾರೆ. ಈಗಲೂ ಹೋರಾಟ ಮಾಡುವ ಕಾರ್ಯಕರ್ತರಿದ್ದಾರೆ. ನಾವು ಕೆಲವು ಕಡೆ ಮೂರನೇ ಸ್ಥಾನ ಇರಬಹುದು ಆದರೂ ಹಲವೆಡೆ ಮೊದಲನೇ ಸ್ಥಾನದಲ್ಲೇ ಇದ್ದೇವೆ. ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಹಲವೆಡೆ ಮೊದಲ ಸ್ಥಾನದಲ್ಲಿ ಇದ್ದೇವೆ ಎಂದು  ಆತ್ಮವಿಶ್ವಾಸ ತುಂಬಿಸಿದರು.

ಇತ್ತೀಚಿನ ಸುದ್ದಿ

Exit mobile version