10:06 PM Tuesday 14 - October 2025

ಕಾಳಿ ನದಿಯಲ್ಲಿ ಸಿಲುಕಿ, ಮೂರು ದಿನಗಳ ಕಾಲ ಸಣ್ಣ ಗಿಡ ಹಿಡಿದುಕೊಂಡು ಸಾವನ್ನು ಗೆದ್ದ ವೃದ್ಧ!

veknataray
19/05/2021

ಕಾರವಾರ: ತೌಕ್ತೆ ಚಂಡಮಾರುತದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವೃದ್ಧರೋರ್ವರು ಮೂರು ದಿನಗಳವರೆಗೆ ನೀರಿನಲ್ಲಿಯೇ ಇದ್ದರೂ ಸಾವನ್ನೇ ಗೆದ್ದು ಬಂದಿರುವ ಅಪರೂಪದ ಘಟನೆಯೊಂದು ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ.

ವೆಂಕಟರಾಯ್ ಕೋಠಾರಕರ್ ಎಂಬವರು ಮೇ 16ರ ಸಂಜೆ ತೌಕ್ತೆ ಚಂಡಮಾರುತದ ಭಾರೀ ಅಬ್ಬರದ ನಡುವೆಯೇ ತಮ್ಮ ಕೋಣವನ್ನು ಹುಡುಕಲು ತೆರಳಿದ್ದರು.  ಆದರೆ ಹೀಗೆ ಹೋದ ಅವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡು ಕುಟುಂಬಸ್ಥರು, ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ.

ವೆಂಕಟರಾಯ್ ಅವರು ನಾಪತ್ತೆಯಾಗಿರುವುದರಿಂದ ಊರಿಡೀ ಹುಡುಕಾಟ ನಡೆಸಿಯೂ ಸಿಗದಿದ್ದಾಗ ಊರಿನವರಿಗೆ ವಿಷಯ ತಿಳಿಸಿದ್ದು, ಊರಿನವರು ಕೂಡ ಹುಟುಕಾಟ ನಡೆಸಿದ್ದಾರೆ.  ಎರಡು ದಿನ ಹುಡುಕಾಟ ಮುಂದುವರಿದರೂ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ. ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದರೂ ಅವರು ಸಿಗದಿದ್ದಾಗ, ಕಾಳಿ ನದಿಯ ತೀರದಲ್ಲಿ ಜನರು ಹುಡುಕಾಟ ನಡೆಸಿದ್ದಾರೆ.

ಈ ವೇಳೆ ನದಿಯ ಹಿನ್ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿದ್ದ ಅವರು ಸಣ್ಣ ಗಿಡವೊಂದನ್ನು ಹಿಡಿದುಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಪತ್ತೆಯಾಗಿದೆ.  ತಕ್ಷಣವೇ ಅವರನ್ನು ರಕ್ಷಣೆ ಮಾಡಿ, ಮನೆಗೆ ತಂದು ಆರೈಕೆ ಮಾಡಲಾಗಿದೆ. ಸತತ ಮೂರು ದಿನಗಳಿಂದ ನೀರಿನಲ್ಲಿದ್ದುದರಿಂದ ಅವರು ಇನ್ನೂ ಅಸ್ವಸ್ಥರಾಗಿಯೇ ಇದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version