1:01 PM Wednesday 9 - September 2026

ಕ್ಷಮಿಸಿ ಬಿಡು ಕಂದಾ | ಉದಂತ ಶಿವಕುಮಾರ್

govu
14/01/2025

ನಿನ್ನಮ್ಮನೂ ನಾ ಕೊಟ್ಟ ಹಾಲು
ಕುಡಿದು ಬೆಳೆದವಳು ಕಂದಾ
ನಿನಗೆ ಮಾತ್ರ ನಂಜಾದದ್ದು
ಏಕೆಂದು ತಿಳಿಯುತ್ತಿಲ್ಲ ಕಂದಾ
ಆದರೂ ಆಕೆ ಕೇಡು ಬಗೆಯಲಿಲ್ಲ
ಏಕೆಂದರೆ ಆಕೆ ನನ್ನ ಹಾಗೆ ತಾಯಿಯಾದವಳು

ಕೊಲ್ಲುವ ಮನಸಿದ್ದರೆ ಒಂದೇ
ಬಾರಿಗೆ ಕೊಂದು ಬಿಡಬೇಕಿತ್ತು ಕಂದಾ
ಇಲ್ಲದಿದ್ದರೆ ಉಸಿರು ನಿಲ್ಲುವವರೆಗೂ
ನೀನು ನೇಣು ಬಿಗಿಯಬೇಕಿತ್ತು ಕಂದಾ
ಆದರೆ ಹೀಗೆ ಹಾಲಿಗೆ ಹುಳಿ ಹಿಂಡುವ
ಕೆಲಸ ಮಾಡಬಾರದಿತ್ತು ಕಂದಾ

ನನ್ನ ಕೆಚ್ಚಲು ಕುಯ್ಯುವಾಗ ನಿನಗೆ
ಅಮ್ಮನ ನೆನಪಾಗಲಿಲ್ಲವೆ ಕಂದಾ
ಹಾಲು ಕುಡಿಯುವ ನಿನ್ನ ಬುದ್ದಿಗೆ
ರಕ್ತ ಕುಡಿಯುವ ಗರ ಬಡಿದದ್ದಾರೂ
ಏತಕೆ ಕಂದಾ, ಹುಲ್ಲು ರಕ್ತವಾಗಿ, ರಕ್ತ
ಹಾಲಾಗಿಸುವುದು ಹೇಗೆಂದು ನಿನ್ನಮ್ಮನನ್ನು
ಕೇಳಬೇಕಾಗಿತ್ತು ಕಂದಾ

ಮಾತಿನ ಧ್ವನಿಯಿಲ್ಲ ಹಾಡುವ ಕೊರಳಿಲ್ಲ
ಒಸರುವ ರಕ್ತದಲ್ಲಿ ಯಾವ ಹಸಿರು
ಬೆಳೆಯುವುದಿಲ್ಲ ಕಂದಾ, ಅಮ್ಮನ ತಾಳ್ಮೆಯ
ಭೂತಾಯಿಯ ಸಹನೆಯ ಪರೀಕ್ಷಿಸಬಾರದು ಕಂದಾ
ಹಾಲು ಹಾಲಹಲವಾದರೆ ಬದುಕು ಉಳಿಯುವುದೇ ಭೂಮಿಯಲ್ಲಿ ಕಂದಾ, ಕ್ಷಮಿಸಿ ಬಿಡು ಕಂದ
ನಿನಗೆ ಬೇಕಾದದ್ದು ನಾನು ಕೊಡಲಾದದ್ದಕ್ಕೆ !

  • ಉದಂತ ಶಿವಕುಮಾರ್

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version