8:12 PM Saturday 24 - January 2026

ಸೋತ ಅಭ್ಯರ್ಥಿಯ ಮನೆಯ ಮುಂದೆ ವಿಜಯೋತ್ಸವ | ಎರಡೂ ತಂಡಗಳ ನಡುವೆ ಮಾರಾಮಾರಿ ಓರ್ವ ಸಾವು

31/12/2020

ಬೆಳಗಾವಿ:  ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ವಿಜಯೋತ್ಸವವನ್ನು ತನ್ನ ಮನೆಯಂಗಳಲ್ಲಿ ಆಚರಿಸುವುದು ಬಿಟ್ಟು, ಸೋತ ಅಭ್ಯರ್ಥಿಯ ಮನೆಯ ಮುಂದೆ ಆಚರಿಸಿದ್ದಾನೆ. ಇದರಿಂದ ಆಕ್ರೋಶಿತ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳೊಂದಿಗೆ ಮಾರಾಮಾರಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು.  ಬಶೀರ ಮುಲ್ಲಾ ಹಾಗೂ ಶಬೀರ ಮುಲ್ಲಾ  ಇಬ್ಬರು ಕಣದಲ್ಲಿದ್ದರು. ಚುನಾವಣೆಯ ಬಳಿಕ ನಿನ್ನೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಶೀರ ಮುಲ್ಲಾ ಗೆಲುವು ಸಾಧಿಸಿದ್ದಾರೆ.

ಗೆಲುವಿನ ಬಳಿಕ ಬಶೀರ ಮುಲ್ಲಾ  ತನ್ನ ಪ್ರತಿ ಸ್ಪರ್ಧಿ ಶಬ್ಬೀರ ಮುಲ್ಲಾ ಅವರ ಮನೆಯ ಮುಂದೆ ವಿಜಯೋತ್ಸವ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಶಬ್ಬೀರ ಮುಲ್ಲಾ ಬೆಂಬಲಿಗರು ತಿರುಗಿ ಬಿದ್ದಾರೆ. ಈ ವೇಳೆ ಎರಡೂ ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳು ಝಳಪಿಸಿವೆ.

ಮಾರಾಮಾರಿಯ ಸಂದರ್ಭದಲ್ಲಿ 50 ವರ್ಷದ ಶಾನೂರ ಮುಲ್ಲಾ ಸಾವನ್ನಪ್ಪಿದ್ದು, ಈ ವ್ಯಕ್ತಿ ಗೆದ್ದ ಅಭ್ಯರ್ಥಿ ಬಶೀರ ಮುಲ್ಲಾ ಸಂಬಂಧಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 6 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಹುಕ್ಕೇರಿ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version