ಸಂಸತ್ ಭವನದ ಮೇಲೆ ದಾಳಿ ಬೆನ್ನಲ್ಲೇ ಎಚ್ಚತ್ತುಕೊಂಡ ರಾಜ್ಯ ಸರ್ಕಾರ: ಭದ್ರತಾ ಜಬಾಬ್ದಾರಿ ಪೊಲೀಸ್ ಇಲಾಖೆಗೆ!

ಬೆಂಗಳೂರು: ಸಂಸತ್ ಭವನಕ್ಕೆ ಅಪರಿಚಿತರು ನುಗ್ಗಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿಧಾನ ಸೌಧ ಭದ್ರತಾ ಹೊಣೆಯನ್ನು ಪೊಲೀಸರಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ.
ವಿಧಾನಸೌಧ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹಲವಾರು ಇಲಾಖೆಗಳು ಹೊತ್ತಿಕೊಂಡಿವೆ. ಆದರೆ, ಭದ್ರತಾ ವೈಫಲ್ಯಗಳು ಎದುರಾಗಿದ್ದೇ ಆದರೆ, ಹೊಣೆಗಾರಿಕೆಯನ್ನು ನಿರ್ದಿಷ್ಟ ಇಲಾಖೆಯ ಮೇಲೆ ಹೊರಿಸಲು ಸಾಧ್ಯವಾಗುವಿದಿಲ್ಲ. ಹೀಗಾಗಿ ಅಧಿವೇಶನಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಘಿದೆ.
ಶಾಸಕರು ಮತ್ತು ವಿಧಾನಸೌಧಕ್ಕೆ ಭೇಟಿ ನೀಡುವವರ ಸುರಕ್ಷತೆಯ ಜವಾಬ್ದಾರಿ ಪೊಲೀಸರ ಮೇಲೆ ಇದೆ. ಹೀಗಾಗಿ ವಿಧಾನಸೌಧದ ಭದ್ರತೆಯ ಹೊಣೆಯನ್ನು ಪೊಲೀಸರಿಗೇ ನೀಡುವ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಹೇಳಿದ್ದಾರೆ.
ವಿಧಾನಸೌಧ ಹಾಗೂ ಸುತ್ತಮುತ್ತ ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ. ಇಂತಹ ಕ್ಯಾಮೆರಾಗಳನ್ನು ಅಳವಡಿಸಲು 10–12 ಏಜೆನ್ಸಿಗಳು ಮುಂದೆ ಬಂದಿವೆ. ಶೀಘ್ರದಲ್ಲೇ ಪೊಲೀಸ್ ಸಿಬ್ಬಂದಿಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಧಾನಸೌಧದ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ನೀಡಲಾಗುತ್ತದೆ. ಪೊಲೀಸರು ವಿಧಾನಸೌಧದಲ್ಲಿ ಅಳವಡಿಸಲಾಗುವ ಹೈಟೆಕ್ ಸೆಕ್ಯುರಿಟಿ ಗ್ಯಾಜೆಟ್ಗಳ ಮೇಲೆ ನಿಗಾ ಇಡುತ್ತಾರೆಂದು ತಿಳಿಸಿದ್ದಾರೆ.
ಸಂದರ್ಶಕರಿಗೆ ನೀಡುವ ಪಾಸ್ ಗಳಿಗೆ ಅಂತಿಮ ಅನುಮೋದನೆ ನೀಡುವ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಲಾಗುವುದು. ಇದು ಸುರಕ್ಷತೆಯ ವಿಷಯವಾಗಿದ್ದು, ಪೊಲೀಸರಿಗೆ ಇದರ ಜವಾಬ್ದಾರಿಯನ್ನು ನೀಡಲಾಗುವುದು ಎಂದರು.