11:15 AM Saturday 18 - October 2025

ಕೇಡಿ ಜಿಲ್ಲಾಧಿಕಾರಿ | ಯುವಕನ ಮೊಬೈಲ್ ಹೊಡೆದು ಹಾಕಿ, ಕಪಾಳಕ್ಕೆ ಬಾರಿಸಿದ ಡಿಸಿ

raipura dc
23/05/2021

ರಾಯ್ಪುರ್: ಔಷಧಿ ತರಲು ಮನೆಯಿಂದ ಹೊರ ಬಂದಿದ್ದ ಯುವಕನ ಮೊಬೈಲ್ ನ್ನು ಜಿಲ್ಲಾಧಿಕಾರಿಯೊಬ್ಬ ಹೊಡೆದು ಹಾಕಿ, ಆತನ ಕಪಾಳಕ್ಕೆ ಬಾರಿಸಿ, ಪೊಲೀಸರ ಕೈಯಿಂದಲೂ ಹೊಡೆಸಿದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಛತ್ತೀಸ್ ಗಢದ ಸುರಾಜ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿ ರಣ್ಬೀರ್ ಶರ್ಮಾ ಈ ಕುಕೃತ್ಯ ಎಸಗಿದವನಾಗಿದ್ದಾನೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ಜಿಲ್ಲಾಧಿಕಾರಿ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

ಲಾಕ್ ಡೌನ್ ಇದ್ದರೂ ಯುವಕನೋರ್ವ ಮನೆಯಿಂದ ಹೊರ ಬಂದಿದ್ದಾನೆ. ಈ ವೇಳೆ ಮನೆಯಿಂದ ಯಾಕೆ ಬಂದಿದ್ದೀ? ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾನೆ.  ಈ ವೇಳೆ ಯುವಕ ತನ್ನ ಮೊಬೈಲ್ ನ್ನು ಜಿಲ್ಲಾಧಿಕಾರಿ ಕೈಗೆ ವಿಶ್ವಾಸದಿಂದ ನೀಡಿ, ಅದರಲ್ಲಿದ್ದ ದಾಖಲೆ ಹಾಗೂ ತನ್ನ ಕೈಯಲ್ಲಿದ್ದ ಕೆಲವು ಚೀಟಿಗಳನ್ನು ತೋರಿಸಲು ಮುಂದಾಗಿದ್ದಾನೆ. ಆದರೆ ಆತನ ಮಾತು ಕೇಳುವ ವ್ಯವಧಾನವೂ ಇಲ್ಲದೇ ಡಿಸಿ ಏಕಾಏಕಿ ಆತನ ಮೊಬೈಲ್ ನ್ನು ರಸ್ತೆಗೆ ಕೋಪದಿಂದ ಎಸೆದಿದ್ದಾನೆ. ಬಳಿಕ ಕಪಾಳಕ್ಕೆ ಬಾರಿಸಿದ್ದು, ಪೊಲೀಸರನ್ನು ಕರೆಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ವಿಡಿಯೋದಲ್ಲಿ ಯುವಕನ ಯಾವುದೇ ತಪ್ಪು ಕಂಡು ಬರುತ್ತಿಲ್ಲ. ಆದರೆ, ಜಿಲ್ಲಾಧಿಕಾರಿಯು, ಯುವಕ ಅತೀಯಾದ ವೇಗದಿಂದ ಬೈಕ್ ಓಡಿಸುತ್ತಿದ್ದ, ಉತ್ತರ ಕೇಳಿದಾಗ ಸರಿಯಾಗಿ ಉತ್ತರಿಸಲಿಲ್ಲ. ಅದಕ್ಕೆ ಹೊಡೆದಿರುವುದಾಗಿ ತಿಳಿಸಿದ್ದಾನೆ. ಆದರೆ ರಸ್ತೆಯಲ್ಲಿ ಮೊಬೈಲ್ ಹೊಡೆದು ಹಾಕುವುದು, ಕಪಾಳಕ್ಕೆ ಬಾರಿಸಲು ಆತ ಜಿಲ್ಲಾಧಿಕಾರಿಯೋ ಅಥವಾ ರೌಡಿಯೋ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version