ಅವಘಡ: ಕೇರಳದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಕಾಲ್ತುಳಿತ: ನಾಲ್ವರು ಕಾಲೇಜು ವಿದ್ಯಾರ್ಥಿಗಳ ಸಾವು; 60 ಮಂದಿಗೆ ಗಾಯ

26/11/2023

ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಕುಸಾಟ್) ವಿಶ್ವವಿದ್ಯಾಲಯದ ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ತೆರೆದ ಸಭಾಂಗಣದಲ್ಲಿ ನಡೆದ ನಿಖಿತಾ ಗಾಂಧಿ ಅವರ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಈ ದುರಂತ ಘಟನೆ ಸಂಭವಿಸಿದೆ. ಗಾಯಾಳಿಗಳಿಗೆ ಚಿಕಿತ್ಸೆ ನೀಡಲು ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಕುಸಾಟ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಂಕರನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಗೀತ ಕಾರ್ಯಕ್ರಮ ಟೆಕ್ ಫೆಸ್ಟ್ ನ ಭಾಗವಾಗಿತ್ತು. 2000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಮಳೆ ಪರಿಸ್ಥಿತಿಯಿಂದಾಗಿ ಕೆಲವು ವಿದ್ಯಾರ್ಥಿಗಳು ಮೆಟ್ಟಿಲುಗಳ ಮೇಲೆ ಜಾರಿ ಕಾಲ್ತುಳಿತ ಘಟನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್.ಅಜಿತ್ ಕುಮಾರ್, “ಅನಿರೀಕ್ಷಿತ ಮಳೆಯಿಂದಾಗಿ ಸ್ಥಳದಲ್ಲಿದ್ದವರು ಆಶ್ರಯ ಪಡೆಯಲು ಓಡಿ ಹೋದ ಪರಿಣಾಮ ಮೆಟ್ಟಿಲುಗಳ ಮೇಲಿದ್ದ ವ್ಯಕ್ತಿಗಳು ಜಾರಿ ಬಿದ್ದು ಕಾಲ್ತುಳಿತ ಉಂಟಾಯಿತು” ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version