ಅಂಬೇಡ್ಕರ್, ನೀಲಿಶಾಲು ಬಗ್ಗೆ ಅವಹೇಳನಾಕಾರಿ ಬರಹ: ಪ್ರವೀಣ್ ಮದ್ದಡ್ಕ ವಿರುದ್ಧ ಮೂಡುಬಿದ್ರೆಯಲ್ಲಿ ದೂರು ದಾಖಲು

ಮೂಡುಬಿದ್ರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನೀಲಿಶಾಲು ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಬರಹ ಬರೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ʼಪ್ರವೀಣ್ ಮದ್ದಡ್ಕʼ ಎಂಬಾತನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಭೀಮ್ ಆರ್ಮಿ ತಾಲೂಕು ಘಟಕ ಮೂಡುಬಿದಿರೆ ದೂರು ದಾಖಲಿಸಿದೆ.
ಬಳಿಕ ಮಹಾನಾಯಕ.ಇನ್ ಜೊತೆಗೆ ಮಾತನಾಡಿದ ದಲಿತ ಮುಖಂಡ ಭಾಸ್ಕರ್ ನೆತ್ತೋಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನೀಲಿಶಾಲು ಧರಿಸುವವರ ಬಗ್ಗೆ ಪ್ರವೀಣ್ ಮದ್ದಡ್ಕ ಎಂಬಾತ ಅವಹೇಳನಾಕಾರಿಯಾಗಿ ಮಾತನಾಡಿದ್ದಾನೆ. ಈತನ ವಿರುದ್ಧ ಇದೀಗ ಪೊಲೀಸ್ ಇಲಾಖೆಗೆ ದೂರು ನೀಡಿದ್ದೇವೆ. ಒಂದು ವೇಳೆ ಪೊಲೀಸರು ಕ್ರಮಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದರು.
ನೀಲಿ ಶಾಲು ಎನ್ನುವುದು ನಮ್ಮ ಸ್ವಾಭಿಮಾನದ ಸಂಕೇತ ಇದರ ಬಗ್ಗೆ ಕೆಲವರು ಕೇವಲವಾಗಿ ಹೇಳಿಕೆ ಕೊಡುತ್ತಿದ್ದಾರೆ. ಇಂತಹವರ ವಿರುದ್ಧ ನಾವು ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುತ್ತೇವೆ ಎಂದು ಭಾಸ್ಕರ್ ಎಚ್ಚರಿಕೆ ನೀಡಿದರು.
ಬಳಿಕ ಕರ್ನಾಟಕ ಭೀಮ್ ಆರ್ಮಿಯ ದಿನೇಶ್ ಮೂಡುಕೋಣಾಜೆ ಮಾತನಾಡಿ, ಪ್ರವೀಣ್ ಮದ್ದಡ್ಕ ನೀಲಿಶಾಲು ಧರಿಸುವ ಜನಾಂಗದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಬರೆದುಕೊಂಡು ಇದೀಗ ಹೆದರಿ ತಲೆಮರೆಸಿಕೊಂಡಿದ್ದಾನೆ. ಈತನ ವಿರುದ್ಧ ಪೊಲೀಸರು ಕಠಿಣ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ದಲಿತ ಮುಖಂಡರಾದ ಭಾಸ್ಕರ್ ನೆತ್ತೋಡಿ, ಗಣೇಶ್ ಪ್ರಸಾದ್ ಮೂಡುಕೋಣಾಜೆ, ರಾಜೇಶ್ ನೆತ್ತೋಡಿ, ಹರೀಶ್ ಗುರುಪುರ, ಕರ್ನಾಟಕ ಭೀಮ್ ಆರ್ಮಿ ಯ ಸುಂದರ್ ಶಿರ್ತಾಡಿ, ದಿನೇಶ್ ಮೂಡುಕೋಣಾಜೆ, ಸತೀಶ್ ಮೂಡುಕೋಣಾಜೆ, ಸುಖೇಶ್ ಶಿರ್ತಾಡಿ, ಸಂದೀಪ್ ಶಿರ್ತಾಡಿ, ಅನಿಲ್ ಶಿರ್ತಾಡಿ, ಪವನ್ ನೆತ್ತೋಡಿ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth