ಇನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು, ಮರುಪಡೆಯಲೂ ಹಣ ಪಾವತಿಸಬೇಕು | ಗ್ರಾಹಕರಿಗೆ ಶಾಕ್ ನೀಡಿದ ಈ ಬ್ಯಾಂಕ್ ನ ಸುತ್ತೋಲೆ
ನವದೆಹಲಿ: ಬ್ಯಾಂಕ್ ಗಳ ಹಗಲು ದರೋಡೆ ಮುಂದುವರಿದಿದ್ದು, ಇದೀಗ ಅಂಚೆ ಬ್ಯಾಂಕ್ ಗ್ರಾಹಕರನ್ನು ದರೋಡೆ ಮಾಡಲು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಬ್ಯಾಂಕ್ ನಲ್ಲಿ ಹಣ ಠೇವಣಿ ಇಡಲು ಮತ್ತು ಹಿಂಪಡೆಯಲು ಇಂಡಿಯಾ ಪೋಸ್ಟ್ ಬ್ಯಾಂಕ್ ಗ್ರಾಹಕರ ಮೇಲೆ ಶುಲ್ಕ ವಿಧಿಸಲು ಮುಂದಾಗಿದೆ.
ಇಂತಹದ್ದೊಂದು ಸುತ್ತೋಲೆಯ ಬಗ್ಗೆ ಕೇರಳದ ಹಲವು ಮಾಧ್ಯಮಗಳು ವರದಿ ಮಾಡಿವೆ. ಕೇರಳ ಅಂಚೆ ಬ್ಯಾಂಕ್ ಗಳ ಮೂಲಗಳಿಂದ ಇಂತಹದ್ದೊಂದು ಮಾಹಿತಿ ಹೊರ ಬಂದಿದೆ ಎಂದು ಹೇಳಲಾಗಿದೆ. ಹೀಗಾಗಿ ಇದೇ ನಿಯಮಗಳನ್ನು ಇತರ ಬ್ಯಾಂಕ್ ಗಳು ಕೂಡಅನುಸರಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.
ಈ ಸುತ್ತೋಲೆಯ ಪ್ರಕಾರ ಮೂಲ ಉಳಿತಾಯ ಖಾತೆಗಳಿಂದ ಗ್ರಾಹಕರು ನಾಲ್ಕು ಬಾರಿ ಹಣವನ್ನು ಹಿಂಪಡೆಯಬಹುದು. ಅದಕ್ಕಿಂತಲೂ ಹೆಚ್ಚು ಬಾರಿ ಹಣ ಡ್ರಾ ಮಾಡಿದರೆ, ಗ್ರಾಹಕರಿಗೆ ಪ್ರತಿ ವಹಿವಾಟಿಗೆ 25 ರೂ. ಗ್ರಾಹಕರ ಖಾತೆಗಳಿಂದ ಬ್ಯಾಂಕ್ ವಸೂಲಿ ಮಾಡಿಕೊಳ್ಳುತ್ತದೆ.
ಎಪ್ರಿಲ್ 1ರಿಂದ ಈ ಹೊಸ ನಿಯಮ ಜಾರಿಯಾಗಲಿದ್ದು, ಕ್ಯಾಶ್ ವಿತ್ ಡ್ರಾ ಮತ್ತು ಕ್ಯಾಶ್ ಡಿಪಾಸಿಟ್ ಮತ್ತು ಪ್ರತಿ ಟ್ರಾನ್ಸಾಕ್ಷನ್ ಗಳ ಮೇಲೆ ಬ್ಯಾಂಕ್ ಶುಲ್ಕ ವಿಧಿಸಲಿದೆ. ಈ ಬಗ್ಗೆ www.ippbonline.com ನಲ್ಲಿ ಕೂಡ ಮಾಹಿತಿಯನ್ನು ನೀಡಲಾಗಿದೆ.
ಇನ್ನೂ ಆಧಾರ್ ಆಧಾರಿತ ಬ್ಯಾಂಕ್ ವಹಿವಾಟುಗಳಿಗೆ ಕೂಡ ಹಣಪಾವತಿಸಬೇಕು. ಈ ವಹಿವಾಟುಗಳಿಗೆ ಗ್ರಾಹಕರು 20 ರೂ. ಹಣ ಪಾವತಿಸಬೇಕು. ಮಿನಿ ಸ್ಟೇಟ್ ಮೆಂಟ್ ಗಳನ್ನು ಪಡೆಯುವುದಿದ್ದರೂ ಗ್ರಾಹಕರು ಹಣ ಪಾವತಿ ಮಾಡಬೇಕು. ಎಲ್ಲ ಶುಲ್ಕಗಳಿಗೂ ಜಿಎಸ್ ಟಿ ಕೂಡ ಹಾಕಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಮೂಲಕ ಬ್ಯಾಂಕ್ ನಲ್ಲಿ ಖಾತೆ ಇರುವ ಗ್ರಾಹಕರು ಅಪಾರ ಪ್ರಮಾಣದಲ್ಲಿ ಹಣ ಕಳೆದುಕೊಳ್ಳುವುದು ಖಚಿತ ಎಂದೇ ಹೇಳಲಾಗುತ್ತಿವೆ.























