ಎಷ್ಟು ಬಿಜೆಪಿ ನಾಯಕರ ಮಕ್ಕಳು ಗೋಶಾಲೆಯಲ್ಲಿ ಕೆಲಸ ಮಾಡುತ್ತಾರೆ?: ಮಂಗಳೂರಿನಲ್ಲಿ ಪ್ರಿಯಾಂಕ್ ಖರ್ಗೆ ಪ್ರಶ್ನೆ

priyank kharge
06/09/2022

ಮಂಗಳೂರು: ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ  ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಕನ್ನಡ ಬಿಜೆಪಿಯ ಪ್ರಯೋಗ ಶಾಲೆಯಾಗಿದೆ. ಡಬಲ್‌ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ ಆಗುತ್ತಿದೆ. ಮೋದಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುತ್ತಾರೆ ಎಂಬ ಆಸೆ ಜನರಲ್ಲಿತ್ತು. ಆದರೆ ಮೋದಿ ಏನೂ ಘೋಷಣೆ ಮಾಡಿಲ್ಲ, ಇದರಿಂದ ಜನರಿಗೆ ಭಾರೀ ನಿರಾಸೆಯಾಗಿದೆ ಎಂದರು.

ಗುರುನಾರಾಯಣ ಪೀಠ ಮತ್ತು ನಿಗಮ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಘೋಷಣೆ ಮಾಡಿಲ್ಲ ಅಂತಾ ನನಗೇನೂ ಆಶ್ಚರ್ಯ ಇಲ್ಲ. ಬಿಜೆಪಿ ಸರ್ಕಾರ ನಾರಾಯಣ ಗುರುಗೆ ಪದೇ ಪದೇ ಅವಮಾನ ಮಾಡುತ್ತಿದೆ. ಪಠ್ಯ ಪುಸ್ತಕ, ಟ್ಯಾಬ್ಲೋದಲ್ಲೂ ನಾರಾಯಣ ಗುರುವಿಗೆ ಅವಮಾನ ಮಾಡಿದ್ದಾರೆ. ಆದರೆ ಈ ರೀತಿ ಅವಮಾನ ಆದಾಗ ಬಿಜೆಪಿ ಶಾಸಕ, ಸಚಿವರು ಯಾರೂ ಮಾತನಾಡಿಲ್ಲ. ನಾರಾಯಣ ಗುರು ಹೆಸರಲ್ಲಿ ವೋಟ್ ತೆಗೆದುಕೊಳ್ಳುತ್ತಾರೆ. ಅನ್ಯಾಯ ಆದಾಗ ಮಾತ್ರ ಬಾಯಿ ಮುಚ್ಚಿಕೊಳ್ಳುತ್ತಾರೆ‌. ಡಬಲ್‌ ಇಂಜಿನ್ ಸರ್ಕಾರ ಮೂರು ವರ್ಷದಿಂದ ಕತ್ತೆ ಕಾಯುತ್ತಿದ್ಯಾ?. ಎಂಟು ವರ್ಷದಿಂದ ನಾವು ಮಾಡಿದ ಆಸ್ತಿ ಮಾರಾಟ ಮಾಡುತ್ತಿದ್ದೀರಿ. ಅತಿವೃಷ್ಠಿಯಿಂದ ಎಲ್ಲವೂ ನಾಶವಾಗಿದೆ. ಸರ್ಕಾರಕ್ಕೆ ಕಮಿಷನ್ ನಲ್ಲಿ ಮಾತ್ರ ಆಸಕ್ತಿ ಇದೆ  ಎಂದು ಅವರು ವಾಗ್ದಾಳಿ ನಡೆಸಿದರು.

ಇನ್ನು ಯೋಗೇಶ್ವರ್,ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ಸೇರಿದಂತೆ ಬಿಜೆಪಿ ವಿರುದ್ಧವೇ ಟೀಕೆ ಮಾಡುತ್ತಿದ್ದಾರೆ. ಕೆ.ಎಸ್. ಈಶ್ವರಪ್ಪ ಗವರ್ನರ್ ಗೇ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ vs  ಬಿಜೆಪಿ ಜಗಳವಾಗುತ್ತಿದೆ. ಬಿಜೆಪಿ ಗೂಂಡಾಗಳನ್ನು ಬೆಳೆಸುತ್ತಿದೆ. ಕರಾವಳಿ ಭಾಗದಲ್ಲಿ ಕಟೀಲ್ ರನ್ನು ಪವರ್ ಫುಲ್ ಅಂತಾ ಭಾವಿಸಿದ್ದೆ. ಆದರೆ ಇಲ್ಲಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮಕ್ಕಿಲ್ಲ. ಮೋದಿ, ನಳಿನ್ ಹೆಸರನ್ನು ವೇದಿಕೆಯಲ್ಲಿ ಹೇಳಿದ್ರಾ. ಬಿಜೆಪಿಯ ವಿರುದ್ಧ ಮಾತನಾಡಿದ ಅವರದ್ದೇ ಪಕ್ಷದವರಿಗೆ ಒಂದು ನೋಟಿಸ್ ನೀಡಿದ್ರಾ? ನಮ್ಮ ಪಕ್ಷ ದ ಶಿಸ್ತು ಬಗ್ಗೆ ಮಾತನಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಎಂಪಿ ಬದಲಾವಣೆ ಗೆ ಕಾರ್ಯಕರ್ತರೇ ಅಭಿಯಾನ ಮಾಡುತ್ತಿದ್ದಾರೆ.‌ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಂದ್ರೆ ಹಲಾಲ್ ಜಟ್ಕಾ ಬಗ್ಗೆ ಮಾತನಾಡುತ್ತಾರೆ. ಅಭಿವೃದ್ಧಿ ಬಗ್ಗೆ ಮಾತನಾಡಿದ್ರೆ ಕಾಶ್ಮೀರ್ ಫೈಲ್ ನೋಡಿದ್ರಾ ಅಂತಾ ಹೇಳುತ್ತಾರೆ ಎಂದು ಪ್ರಿಯಾಂಕ್ ತರಾಟೆಗೆತ್ತಿಕೊಂಡರು.

ಬಿಜೆಪಿ ಶಾಸಕರು ಬಿಜೆಪಿ ಸಚಿವರ ಭ್ರಷ್ಟಾಚಾರದ ಬ್ರೋಕರ್ ಗಳಾಗಿದ್ದಾರೆ. ಬಿಜೆಪಿಯವರ ಮಕ್ಕಳು ವಿದೇಶದಲ್ಲಿ ಉದ್ಯೋಗ,ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬಿಜೆಪಿಯ ಎಷ್ಟು ನಾಯಕರ ಮಕ್ಕಳು ಗೋಶಾಲೆಯಲ್ಲಿ ಕೆಲಸ ಮಾಡುತ್ತಾರೆ? ಎಷ್ಟು ಬಿಜೆಪಿ ಎಂಎಲ್ ಎ ಗಳು ಗೋ ಮೂತ್ರ ಕುಡಿಯುತ್ತಾರೆ? ಬಡವರು, ಹಿಂದುಳಿದ ಮಕ್ಕಳಿಗೆ ಕೇಸರಿ ಶಾಲ್ ಹಾಕಿ ಧರ್ಮ ರಕ್ಷಣೆಗೆ ಕಳುಹಿಸುತ್ತಾರೆ. ಯುಪಿಯ ಲೇಸರ್ ಷೋ ಗೆ ದುಡ್ಡು ಕಟ್ಟುತ್ತಿರೋದು ಕರ್ನಾಟಕದವರು. ದ.ಕ. ಜಿಲ್ಲೆಯ ಯುವಕರು ಬಿಜೆಪಿ-ಆರ್ ಎಸ್ ಎಸ್ ಬಲೆಗೆ ಬಿಳೋಕೆ ಹೋಗಬೇಡಿ. ನೂರು ಶೇಕಡಾ ಅಕ್ಷರಸ್ಥರು ಇರುವ ದ.ಕ. ಜಿಲ್ಲೆಯಲ್ಲಿ ಯಾಕೆ ಇವರಿಗೆ ಅವಕಾಶ ನೀಡುತ್ತೀರಿ. ಯುವಕರು ಅರ್ಥ ಇಲ್ಲದ ಧರ್ಮ ದ ಹಿಂದೆ ಹೋಗುತ್ತಿದ್ದಾರೆ. ದ.ಕ ಯುವಕ ಯುವತಿಯರಿಗೆ ಮನವಿ ಮಾಡುತ್ತೇನೆ. ಬಿಜೆಪಿ-ಆರ್ ಎಸ್ ಎಸ್ ನ ಧರ್ಮದ ಟ್ರ್ಯಾಪ್ ಗೆ ಬೀಳಬೇಡಿ ಎಂದು ಅವರು ಮನವಿ ಮಾಡಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version