ಸರಕಾರಿ ಆಸ್ಪತ್ರೆ ಖಾಸಗೀಕರಣದ ವಿರುದ್ಧ ಹೋರಾಟ: ಜುಲೈ 7 ರಂದು ಬಜ್ಪೆಯಲ್ಲಿ ಬೃಹತ್ ಮಾನವ ಸರಪಳಿ
ಬಜ್ಪೆ: ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ಆರೋಗ್ಯ ಇಲಾಖೆಯ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಕಾರಿ ಆಸ್ಪತ್ರೆಗಳ ಮುಂಭಾಗ ತೀವ್ರ ಹೋರಾಟ ಹಾಗೂ ಅಭಿಯಾನಗಳು ನಡೆಯುತ್ತಿವೆ. ಇದರ ಭಾಗವಾಗಿ ಬಜ್ಪೆ ಪಟ್ಟಣದಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಗುರುವಾರ ಸಂಜೆ ಸಿದ್ಧತಾ ಸಭೆ ಜರುಗಿತು.
ದಲಿತ ಸಂಘರ್ಷ ಸಮಿತಿಯ ಮುಂದಾಳತ್ವದಲ್ಲಿ ನಡೆದ ಈ “ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ”ಯ ಸಭೆಯಲ್ಲಿ ಸ್ಥಳೀಯ ವಿವಿಧ ಸಂಘಸಂಸ್ಥೆಗಳು ಹಾಗೂ ಸಮಾನ ಮನಸ್ಕರು ಭಾಗವಹಿಸಿದ್ದರು.
ಸರಕಾರಿ ಆಸ್ಪತ್ರೆಗಳ ರಕ್ಷಣೆಯ ಪ್ರಮುಖ ಬೇಡಿಕೆಯ ಜೊತೆಗೆ, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (PHC) ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಸ್ಥಳೀಯ ಬೇಡಿಕೆಯನ್ನೂ ಈ ಹೋರಾಟದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 07 ರಂದು ಸಂಜೆ 5 ಗಂಟೆಗೆ ಬಜ್ಪೆ ಪೇಟೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮವನ್ನು ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಮುಖಂಡರಾದ ರಘು ಎಕ್ಕಾರು, ಕೃಷ್ಣಾನಂದ ಡಿ, ಸಂಕಪ್ಪ ಕಾಂಚನ್, ರುಕ್ಕಯ್ಯ ಅಮೀನ್ ಕರಂಬಾರು ಉಪಸ್ಥಿತರಿದ್ದರು. ಹಾಗೂ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್, ಕಾರ್ಮಿಕ ಮುಖಂಡ ನೋಣಯ್ಯ ಗೌಡ, ಸಾಮಾಜಿಕ ಕಾರ್ಯಕರ್ತರಾದ ಬಾವ ಪದರಂಗಿ, ಇಡ್ಮಾ ಖಾದರ್, ರಶೀದ್ ಸುರಲ್ಮಾಡಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ನ್ಯಾಯವಾದಿ ಮನೋಜ್ ವಾಮಂಜೂರು, ಶ್ರೀನಾಥ್ ಕುಲಾಲ್, ರಾಬರ್ಟ್ ಫ್ರಾಂಕ್ಲಿನ್ ರೇಗೊ, ಸ್ಟಾನ್ಲಿ ರೋಡ್ರೀಗ್ರಸ್, ಜಾನ್ ಪೀಟರ್, ಅಜ್ಮಲ್ ಕಾನ, ಎಮ್ ಕೆ ಅಶ್ರಫ್ ಮತ್ತು ಹಸೈನಾರ್ ಜೋಕಟ್ಟೆ ಮುಂತಾದವರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























