ನಕಲಿ ಉಂಗುರ ಇಟ್ಟು ಅಸಲಿ ಉಂಗುರ ಕದ್ದ ಕಳ್ಳ: ಕಳ್ಳನ ಕೈಚಳಕಕ್ಕೆ ಬೆಚ್ಚಿಬಿದ್ದ ಜೋಯ್ ಅಲುಕ್ಕಾಸ್ ಸಿಬ್ಬಂದಿ

24/02/2024
ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳನೋರ್ವ ಆಭರಣ ಮಳಿಗೆಯ ಸಿಬ್ಬಂದಿಯ ಕಣ್ತಪ್ಪಿಸಿ 75 ಲಕ್ಷ ರೂಪಾಯಿ ಮೌಲ್ಯದ ಉಂಗುರ ಕದ್ದ ಘಟನೆ ಬೆಂಗಳೂರಿನ ಜೋಯ್ ಅಲುಕ್ಕಾಸ್ ಆಭರಣ ಮಳಿಗೆಯಲ್ಲಿ ನಡೆದಿದೆ.
ಫೆಬ್ರವರಿ 18ರಂದು ನಗರದ ಎಂ.ಜಿ.ರೋಡ್ ನ ಜೋಯ್ ಅಲುಕ್ಕಾಸ್ ನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದಿದ್ದ ಕಳ್ಳ ಸಿಬ್ಬಂದಿಯ ಜೊತೆಗೆ ಮಾತುಕತೆ ನಡೆಸುತ್ತಿದ್ದ. ದುಬಾರಿ ಉಂಗುರವನ್ನು ಹಿಡಿದುಕೊಂಡಿದ್ದ ಈತ ಸಿಬ್ಬಂದಿಯನ್ನು ಬೇರೆಡೆಗೆ ಸೆಳೆದು ನಕಲಿ ಉಂಗುರವನ್ನು ಇಟ್ಟು ಅಸಲಿ ಉಂಗುರವನ್ನು ಕದ್ದಿದ್ದಾನೆ.
ಕಳ್ಳನ ಕೈಚಳಕ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಇದೇ ರೀತಿಯಲ್ಲಿ ಹಲವು ಜ್ಯುವೆಲ್ಲರಿಗಳಲ್ಲಿ ಕಳವು ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಕಳ್ಳನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.