ದಾಳಿ: ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಮಹಿಳಾ ಬ್ರಿಗೇಡ್ ಮುಖ್ಯಸ್ಥೆ ಸೇರಿ ಐವರು ನಕ್ಸಲರ ಅರೆಸ್ಟ್
ನಕ್ಸಲ್ ಮಹಿಳಾ ಬಿಗ್ರೇಡ್ ಮುಖ್ಯಸ್ಥೆ ತಾರಾ ದೇವಿ ಸೇರಿದಂತೆ ಐವರು ನಕ್ಸಲರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಲ್ಲಿಯಾ ಎಂಬಲ್ಲಿ ಬಂಧಿಸಿದೆ. ಸಹತ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತಪುರ ಗ್ರಾಮದಲ್ಲಿ ಅಡಗಿದ್ದ ನಕ್ಸಲರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನಕ್ಸಲೀಯ ಸಾಹಿತ್ಯ, ಕೈಬರಹದ ಮೆಸೇಜ್ ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ನಿಷೇಧಿತ ಸಿಪಿಐ ಮಾವೋವಾದಿ ಗುಂಪಿನೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ತಾರಾ ದೇವಿ ಅಲಿಯಾಸ್ ಮಂಜು ಅವರು 2005 ರಿಂದ ನಿಷೇಧಿತ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ಬಿಹಾರದ ಮಧುಬನ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಬಂಧಿತನನ್ನು ಸತ್ಯಪ್ರಕಾಶ್ ಎಂದು ಗುರುತಿಸಲಾಗಿದ್ದು, ಈತ ನಕ್ಸಲೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಮತ್ತು ರೈತರ ಸಂಘಟನೆಯನ್ನು ರೂಪಿಸಿದ ಆರೋಪ ಹೊತ್ತಿದ್ದಾನೆ. ಪೂರ್ವಾಂಚಲ್
ಪ್ರದೇಶದಲ್ಲಿ ಸಮಿತಿ ಮತ್ತು ಗುಂಪು ಸಭೆಗಳನ್ನು ಕರೆಯುವ ಮೂಲಕ ಅವರು ನಕ್ಸಲ್ ಸಿಂಡಿಕೇಟ್ ಅನ್ನು ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಾಗ್ಪುರದಲ್ಲಿ ನಕ್ಸಲರ ಬಂಧನ ನಾಗ್ಪುರದಲ್ಲಿ ನಕ್ಸಲ್ ಸಂಘಟನೆಯ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸ್ವಯಂಚಾಲಿತ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸರು ಬುಧವಾರ ತಿಳಿಸಿದ್ದಾರೆ. ಅವರ ಬಳಿಯಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳ ಛಾಯಾಚಿತ್ರಗಳು ಮತ್ತು ಕೆಲವು ನಕ್ಸಲ್ ಸಾಹಿತ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಗುಂಪಿನ ನಾಯಕ ಮುರಳಿ ಅಲಿಯಾಸ್ ಮಹೇಶ್ ರೆಡ್ಡಿ, ನೆರೆ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಸಲೇಕಸ ಮತ್ತು ದರೇಕಸ ಭೂಪ್ರದೇಶದಲ್ಲಿ ಈತ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಇತರ ಮೂವರನ್ನು ಧನಂಜಯ್ ಅಲಿಯಾಸ್ ಧನ್ನು ಬುರ್ಲಿ, ನರೇಶ್ ಬನ್ಸೋಡ್ ಮತ್ತು ಅರುಣ್ ಕುಮಾರ್ ಪೆರೆರಾ ಎಂದು ಗುರುತಿಸಲಾಗಿದೆ.

























