11:16 PM Monday 1 - September 2025

ಬಿಜೆಪಿಗೆ ಜೊತೆ ಕೈಜೋಡಿಸಲು ಹಲವು ಷರತ್ತುಗಳನ್ನು ಹಾಕಿದ ಅರುಣ್‌ ಪುತ್ತಿಲ!

arun puttila
05/02/2024

ಮಂಗಳೂರು: ಕರಾವಳಿಯಲ್ಲಿ ಬಿಜೆಪಿಗೆ ಭೀತಿ ಸೃಷ್ಟಿಸಿರುವ  ಅರುಣ್‌ ಪುತ್ತಿಲ ಇದೀಗ ಬಿಜೆಪಿ ಜೊತೆಗೆ ಕೈಜೋಡಿಸಬೇಕಾದರೆ, ಹಲವು ಷರತ್ತುಗಳನ್ನು ಮುಂದಿಟ್ಟಿದ್ದು,  ಈ  ಷರತ್ತಿಗೆ ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದ್ದಾರೆ.

ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ  ಪುತ್ತಿಲ ಪರಿವಾರ ಬಿಜೆಪಿ ಜೊತೆಗೆ ವಿಲೀನವಾಗಲು ಹಲವು ಷರತ್ತುಗಳನ್ನು ಹಾಕಿದೆ.

ಲೋಕಸಭಾ ಚುನಾವಣೆಗೂ ಮೊದಲು ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಅರುಣ್‌ ಪುತ್ತಿಲ ಪರಿವಾರ ಬೇಡಿಕೆಯಿಟ್ಟಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್‌ ಪುತ್ತಿಲ, ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಪರಿವಾರದ ಪ್ರಧಾನ ಬೇಡಿಕೆ. ಜೊತೆಗೆ ಪದಾಧಿಕಾರಿಗಳಲ್ಲೂ ಅವಕಾಶ ನೀಡಬೇಕು ಎಂದು ಕೋರಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರ 718 ವಾಟ್ಸಾಪ್‌ ಗ್ರೂಪ್‌ ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೆ ದೊಡ್ಡ ಸಂಗತಿಯೇ ಅಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ. ಆದರೂ ಅದನ್ನು ಬಿಟ್ಟು ಬಿಜೆಪಿ ಜೊತೆಗೆ ಕೈಜೋಡಿಸಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು.

ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು. ಮಾತೃ ಪಕ್ಷವನ್ನು  ಅಧಿಕಾರಕ್ಕೆ ತರಲು ರಕ್ತವನ್ನು ಬೆವರು ಮಾಡಿ ದುಡಿದಿದ್ದೇವೆ. ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಇರಬೇಕು, ಪುತ್ತಿಲ ಪರಿವಾರ ಸಂಘಟನೆಗಳ ತೀರ್ಮಾನಕ್ಕೆ ನಾನು ಕಟಿಬದ್ಧನಾಗಿದ್ದೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಇನ್ನೂ ಬಿಜೆಪಿ ಪಕ್ಷದವರು ಈ ಬಗ್ಗೆ 3 ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿ

Exit mobile version