10:34 PM Tuesday 27 - January 2026

ಆಸ್ಪತ್ರೆ ಎದುರು 1 ಗಂಟೆವರೆಗೆ ಬೆಡ್ ಗಾಗಿ ಕಾದು ಅಲ್ಲಿಯೇ ಪ್ರಾಣ ಬಿಟ್ಟ ನಿವೃತ್ತ ಯೋಧ!

hospital
15/04/2021

ಪಾಟ್ನಾ: ಆರೋಗ್ಯ ಮೂಲ ಸೌಕರ್ಯದ ಕೊರತೆಯಿಂದಾಗಿ ದೇಶಾದ್ಯಂತ ಕೊರೊನಾ ನಿಯಂತ್ರಣ ಕಷ್ಟಕರವಾಗಿದ್ದು, ಸರ್ಕಾರಗಳು ಕೊರೊನಾ ತುರ್ತುಪರಿಸ್ಥಿತಿ ವಿರುದ್ಧ ಹೋರಾಡಲು ಸಾಕಷ್ಟು ಅವಕಾಶಗಳಿದ್ದರೂ ನಿರ್ಲಕ್ಷ್ಯವಹಿಸಿದ ಪರಿಣಾಮ ಮತ್ತೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

 ಇದೀಗ ಬಿಹಾರದಲ್ಲಿ ಸಚಿವರು ಆಸ್ಪತ್ರೆ ಭೇಟಿಯಲ್ಲಿರುವಾಗಲೇ ಸೋಂಕು ಪೀಡಿತ ನಿವೃತ್ತ ಯೋಧರೊಬ್ಬರು ಚಿಕಿತ್ಸೆ ದೊರೆಯದೇ ಸಾವಿಗೀಡಾದ ಘಟನೆ ನಡೆದಿದೆ.  ಬಿಹಾರ ರಾಜಧಾನಿ ಪಟ್ನಾದಲ್ಲಿ ಆಸ್ಪತ್ರೆ ಎದುರಲ್ಲೇ ಚಿಕಿತ್ಸೆಗಾಗಿ ಕಾದು ಕುಳಿತಿದ್ದ ಕೊರೊನಾ ಸೋಂಕಿತ ನಿವೃತ್ತ ಯೋಧ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

60 ವರ್ಷದ ವಿಕೆ ಸಿಂಗ್ ಮೃತಪಟ್ಟ ನಿವೃತ್ತ ಯೋಧರಾಗಿದ್ದಾರೆ. ಪಾಟ್ನಾ ಏಮ್ಸ್ ಆಸ್ಪತ್ರೆ ಅವರನ್ನು ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಬೆಡ್ ಇಲ್ಲದ ಕಾರಣ  ಎನ್‌ಎಂಸಿಎಚ್ ಆಸ್ಪತ್ರೆಗೆ ಆಯಂಬುಲೆನ್ಸ್ ನಲ್ಲಿ ಅವರನ್ನು ಕರೆದೊಯ್ಯಲಾಗಿದೆ. ಸಿಂಗ್ ಅವರ ಪುತ್ರ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳನ್ನು ಭೇಟಿಯಾಗಿ ತಮ್ಮ ತಂದೆಯ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ. ಆದರೆ ಸಿಬ್ಬಂದಿ  ಕಾಯುವಂತೆ ಸೂಚಿಸಿದ್ದಾರೆ. ಎಚ್‌ ಎಂಸಿಎಚ್ ಆಸ್ಪತ್ರೆ ಎದುರು ಸತತ ಒಂದೂವರೆ ಗಂಟೆ ಕಾದ ಬಳಿಕವೂ ಆಸ್ಪತ್ರೆಯೊಳಗೆ ಸೇರಿಸಲಿಲ್ಲ. ಮೊದಲೇ ನಿಶ್ಯಕ್ತರಾಗಿದ್ದ ಅವರು ಮೃತಪಟ್ಟಿದ್ದಾರೆ.

ನನ್ನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಪಾಟ್ನಾದ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲು ಯತ್ನಿಸಿದೆವು. ಆದರೆ, ಯಾರೊಬ್ಬರೂ ದಾಖಲು ಮಾಡಿಕೊಳ್ಳಲಿಲ್ಲ. ಹೀಗಾಗಿ. ನಾವು ಕೊನೆಗೆ ಎಚ್‌ಎಂಸಿಎಚ್ ಆಸ್ಪತ್ರೆಗೆ ನನ್ನ ತಂದೆಯನ್ನು ಕರೆತಂದೆವು. ಆದರೆ, ಇಲ್ಲಿಯೂ ಕೂಡಾ ಸೂಕ್ತ ಸಮಯಕ್ಕೆ ದಾಖಲು ಮಾಡಿಕೊಳ್ಳಲಿಲ್ಲ. ಸಚಿವರು ಬಂದಿದ್ದರಿಂದ ಸಿಬ್ಬಂದಿಗಳು ಅಲ್ಲಿ ಬಿಸಿಯಾಗಿದ್ದರು. ಇತ್ತ ಯಾರೂ ಕೂಡ ಗಮನ ನೀಡಲಿಲ್ಲ. ಇದರಿಂದಾಗಿ ನಮ್ಮ ತಂದೆ ಸಾವನ್ನಪ್ಪಿದರು ಎಂದು ಪುತ್ರ ಅಭಿಮನ್ಯು ನೋವು ತೋಡಿಕೊಂಡಿದ್ದಾರೆ. ಬಾಯಿ ಮಾತಿನಲ್ಲಿ ಯೋಧ, ಸೈನಿಕ ಎಂದೆಲ್ಲ ಹೊಗಳಿದ್ದೇ ಬಂತು. ಆದರೆ ದೇಶಕ್ಕಾಗಿ ಹೋರಾಡಿದ ಸೈನಿಕನಿಗೆ ಒಂದು ಬೆಡ್ ಒದಗಿಸಲಾಗದ ಸ್ಥಿತಿಯಲ್ಲಿ ದೇಶ ಇದೆ ಎಂದಾದರೆ, ದೇಶ ಎಷ್ಟೊಂದು ಅದೋಗತಿಗೆ ಹೋಗಿದೆ ಎನ್ನುವಂತಾಗಿದೆ.

ಇತ್ತೀಚಿನ ಸುದ್ದಿ

Exit mobile version