ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ವಿಚಾರ: ಬಸ್ ನಿರ್ವಾಹಕನಿಗೆ ತಂಡದಿಂದ ಹಲ್ಲೆ

ದಕ್ಷಿಣ ಕನ್ನಡ: ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಕಾರಣ ತಂಡವೊಂದು ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕಣ್ಣೂರು ಎಂಬಲ್ಲಿ ನಿನ್ನೆ ರಾತ್ರಿ ನಡೆದಿತ್ತು. ಬಸ್ ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಇಂದು ಅಡ್ಯಾರ್, ಕಣ್ಣೂರು ಭಾಗದ ಸಿಟಿ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಪುನಾರರಂಭಗೊಂಡಿದೆ ಎಂಬ ಮಾಹಿತಿ ಸಿಕ್ಕಿದೆ.
ಸಿಟಿ ಬಸ್ ವೊಂದು ಟೈಮಿಂಗ್ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಣ್ಣೂರು ಬಳಿ ನಿಗದಿತ ನಿಲ್ದಾಣದಲ್ಲಿ ನಿಲ್ಲಿಸಿರಲಿಲ್ಲ. ಆದ್ದರಿಂದ ನಿರ್ವಾಹಕ ಯಶವಂತ್ ಮೇಲೆ ಪ್ರಯಾಣಿಕನೋರ್ವನು ಹಲ್ಲೆ ನಡೆಸಿದ್ದಾನೆಂಬ ಆರೋಪ ಕೇಳಿ ಬಂದಿತ್ತು.
ಆ ಬಳಿಕ ಮತ್ತೆ ಹತ್ತಾರು ಮಂದಿ ನಿರ್ವಾಹಕನನ್ನು ಬಸ್ ನಿಂದ ಎಳೆದು ಹಾಕಿ ಹಲ್ಲೆ ನಡೆಸಿದ್ದರೆಂಬ ಆರೋಪ ಕೇಳಿ ಬಂದಿತ್ತು. ಆದ್ದರಿಂದ ಗಂಭೀರವಾಗಿ ಗಾಯಗೊಂಡ ನಿರ್ವಾಹಕ ಯಶವಂತ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಎರಡೂ ಕಡೆಯವರಿಂದ ಕಂಕನಾಡಿ ನಗರ ಠಾಣೆಗೆ ದೂರು ದಾಖಲಾಗಿದೆ. ಆಸ್ಪತ್ರೆಗೆ ದಾಖಲಾದ ಸಿಟಿ ಬಸ್ ಕಂಡಕ್ಟರ್ ಯಶವಂತ್ ಅವರನ್ನು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು.