“ಚೀನಾ ನಮ್ಮ ಸೇನೆಯನ್ನು ತಡೆದಿದೆ, ಪ್ರಧಾನಿ ಮೌನ ಕಳವಳಕಾರಿ”: ಕೇಂದ್ರಕ್ಕೆ ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆ
ನವದೆಹಲಿ: ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಚೀನಾ ನಮ್ಮ ಸೇನೆಯ ಗಸ್ತು ತಿರುಗುವಿಕೆಯನ್ನು (ಪ್ಯಾಟ್ರೋಲಿಂಗ್) ತಡೆದಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, “ಅರುಣಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರತೀಯ ಸೇನೆಯು ಗಸ್ತು ತಿರುಗುವುದನ್ನು ಚೀನಾ ತಡೆದಿದೆ. ಇದು ಅತ್ಯಂತ ಕಳವಳಕಾರಿ ವಿಚಾರ. ಆದರೆ ಇದಕ್ಕಿಂತಲೂ ಹೆದರಿಕೆಯ ವಿಷಯವೆಂದರೆ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೌನ. ಚೀನಾವನ್ನು ತಡೆಯುವ ಬದಲು ಮೋದಿ ಸರ್ಕಾರವು ಈ ಸುದ್ದಿಯನ್ನು ಹತೋಟಿಯಲ್ಲಿಡಲು ಮಾಧ್ಯಮಗಳ ಮೇಲೆ ಒತ್ತಡ ಹೇರುತ್ತಿದೆ” ಎಂದು ದೂರಿದ್ದಾರೆ.
ಗಾಲ್ವಾನ್ ಸಂಘರ್ಷದ ನಂತರ ಪ್ರಧಾನಿ ಮೋದಿ ನೀಡಿದ್ದ “ನಮ್ಮ ಭೂಮಿಯನ್ನು ಯಾರೂ ವಶಪಡಿಸಿಕೊಂಡಿಲ್ಲ” ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ರಾಷ್ಟ್ರೀಯ ಭದ್ರತೆಗಿಂತ ತಮ್ಮ ಇಮೇಜ್ ಉಳಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದು, ಗಡಿ ಭಾಗದ ಪರಿಸ್ಥಿತಿಯ ಕುರಿತು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಮೂಲಗಳ ಪ್ರಕಾರ ಈ ಆರೋಪಗಳನ್ನು ಸೇನಾ ವಲಯಗಳು ನಿರಾಕರಿಸಿದ್ದು, ಗಡಿ ಭಾಗದಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ. ಗಡಿ ರೇಖೆ ಸ್ಪಷ್ಟವಾಗಿ ಗುರುತಿಸಲ್ಪಡದ ಕಾರಣ ಕೆಲವೊಮ್ಮೆ ಗಸ್ತು ತಿರುಗುವಾಗ ಎದುರಾಗುವ ಸವಾಲುಗಳನ್ನು ಹಾಲಿ ಇರುವ ಪ್ರೋಟೋಕಾಲ್ ಮತ್ತು ಯಾಂತ್ರಿಕ ವ್ಯವಸ್ಥೆಗಳ ಮೂಲಕ ಬಗೆಹರಿಸಲಾಗುತ್ತದೆ ಎಂದು ತಿಳಿಸಿವೆ. ಅಲ್ಲದೆ, ಭಾರತೀಯ ಸೇನೆ ಮತ್ತು ITBP ಪಡೆಗಳು ಗಡಿ ರಕ್ಷಣೆ ಮತ್ತು ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಂಪೂರ್ಣ ಸಜ್ಜಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























