ಬಾವಿಗೆ ಹಾರಿ ಯುವ ಕಲಾವಿದ ಸಾವಿಗೆ ಶರಣು

14/08/2023
ಬಾವಿಗೆ ಹಾರಿ ಯುವ ಕಲಾವಿದರೊಬ್ಬರು ಸಾವಿಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಮಿತ್ತಮಜಲು ನಿವಾಸಿ ಚಿತ್ರ ಕಲಾವಿದ ಸಾಗರ್ ಆಚಾರ್ಯ ಎಂದು ಗುರುತಿಸಲಾಗಿದೆ. ಮನೆಯಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನಾರೋಗ್ಯದ ಕಾರಣ ಜೀವನದಲ್ಲಿ ಮನನೊಂದು ಬಾವಿಗೆ ಹಾರಿ ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿ.ಸಿ.ರೋಡಿನ ಸಿ.ಡಿ.ಪಿ.ಒ. ಕಚೇರಿಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹೀಗಾಗಿ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಎರಡೂ ಕಿಡ್ನಿಗಳು ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಈತನ ತಂದೆಯ ಒಂದು ಕಿಡ್ನಿಯನ್ನು ನೀಡಲಾಗಿತ್ತು. ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲಾಗುತ್ತಿತ್ತು.