ಒಕ್ಕಲಿಗರ ಕೊಡುಗೆಯನ್ನು ಗುರುತು ಮಾಡುವ ಕೆಲಸ ಆಗಬೇಕಿದೆ: ಉಪ ಸಭಾಪತಿ ಎಂ.ಕೆ.ಪ್ರಾಣೇಶ್

m k pranesh
28/06/2023

ಮೂಡಿಗೆರೆ : ಹಿಂದಿನಿಂದಲೂ ಒಕ್ಕಲಿಗರು ತಮ್ಮ ಸ್ವಾರ್ಥ ಜೀವನ ಬಿಟ್ಟು ಮಾನವ ಒಂದೇ ಎಂಬ ಭಾವನೆ ಮೂಡಿಸಿಕೊಂಡು ಸಮಾಜಮುಖಿಯಾದ  ಕೆಲಸ ಮಾಡಿಕೊಂಡು ಬಂದಿದ್ದಾರೆ. ಒಕ್ಕಲಿಗರ ಸಮುದಾಯ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಗುರುತು ಮಾಡುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಬುಧವಾರ ಪಟ್ಟಣದ ರೈತಭವನದಲ್ಲಿ ಕೆಂಪೇಗೌಡ ಒಕ್ಕಲಿಗರ ವೇದಿಕೆ ವತಿಯಿಂದ ವಿವಿಧ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ, ರಾಜಕಾರಣದಲ್ಲಿ ಜನಾಂಗ ಗುರುತಿಸುವ ಕೆಟ್ಟ ಸಂಪ್ರದಾಯ ಸೃಷ್ಟಿಯಾಗಿದೆ. ಆದರೆ ಒಕ್ಕಲಿಗರ ಸಮುದಾಯದಲ್ಲಿ ಹೆಚ್ಚಾಗಿ ಸಮಾಜದ ಒಳಿತಿಗಾಗಿ ದುಡಿಯುವ ಜನರೇ ಹೆಚ್ಚಾಗಿದ್ದಾರೆ. ಕೆಂಪೇಗೌಡ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಗುರುತಿಸುವಲ್ಲಿ ವಿಫಲರಾಗಿರುವುದು ವಿಷಾಧನೀಯ.  ಸರ್ವರ ಪ್ರಗತಿಗಾಗಿ  ಬೆಂಗಳೂರು ನಗರವನ್ನು ಕಟ್ಟುವ ಮೂಲಕ ಪ್ರಪಂಚದಲ್ಲಿಯೇ ಅತ್ಯುತ್ತಮ ನಗರವೆಂದು ಗುರುತು ಮಾಡಲು ಕಾರಣಕರ್ತರಾದ ಕೆಂಪೇಗೌಡರ ಕೊಡುಗೆಯನ್ನು ಪ್ರತಿಯೊಬ್ಬರೂ ನೆನೆಪು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಬೆಂಗಳೂರಿನ ವಿಜಯಸಂಜೆ ಕಾಲೇಜು ಉಪ ಪ್ರಾಂಶುಪಾಲ ಡಾ.ಶಾಂತರಾಜ್ ಮಾತನಾಡಿ, ಜಗತ್ತಿನಲ್ಲಿ ಲಕ್ಷಾಂತರ ಮಂದಿ ಹುಟ್ಟಿ, ಎಲ್ಲೆಲ್ಲೋ ಮರೆಯಾಗಿ ಹೋಗುತ್ತಾರೆ. ಆದರೆ ಓರ್ವನ ಗುರುತು ಆಗಬೇಕೆಂದರೆ ಆತನ ವ್ಯಕ್ತಿತ್ವ ಹಾಗೂ ಭಿನ್ನತೆಯಿಂದ ಮಾತ್ರ ಸಾಧ್ಯವಿದೆ. ಹಾಗೆಯೇ ಕೆಂಪೇಗೌಡರ ವ್ಯಕ್ತಿತ್ವ, ಅವರು ಸಾಗಿದ ದಾರಿ, ಸಮಾಜದ ಅಭಿವೃದ್ಧಿಗೆ ಮಾಡಿದ ಮಾರ್ಪಾಡುಗಳಿಂದ ಕೆಂಪೇಗೌಡರನ್ನು ನಾವಿಂದು ಸ್ಮರಿಸುವಂತಾಗಿದೆ. ತಮ್ಮ ಕುಲ ಬಾಂಧವರು, ಸರ್ವರ ಹಿತ ಕಾಪಾಡಲು ಹಾಗೂ ನಾಡಿನ ಭಾವ ಬಿತ್ತುವ ಪರಿಕಲ್ಪನೆ ಹೊಂದಿದ್ದ ಕೆಂಪೇಗೌಡರ ಶ್ರಮದಿಂದ ಇಂದು ಬೆಂಗಳೂರು ಮಹಾನಗರ ಪ್ರಜ್ವಲಿಸಲು ಕಾರಣವಾಗಿದೆ. ಹಾಗಾಗಿ ಮಾನವ ತನ್ನ ಸ್ವಾರ್ಥದ ಪರಮಾವದಿಯಿಂದ ಹೊರ ಬಂದು ನಿಸ್ವಾರ್ಥಿಗಳಾದರೆ ಮಾತ್ರ ಜಗದ, ಜನಾಂಗದ ಆರಾಧಕರಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು; ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಪೇಗೌಡ ಒಕ್ಕಲಿಗರ ವೇದಿಕೆ ಅಧ್ಯಕ್ಷ ಬ್ರಿಜೇಶ್ ವಹಿಸಿದ್ದರು.

ಪ.ಪಂ. ಸದಸ್ಯೆ ಆಶಾ ಮೋಹನ್, ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲಾವತಿ ರಾಜಣ್ಣ, ಒಕ್ಕಲಿಗರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಹಳಸೆ ಶಿವಣ್ಣ,  ಬಿ.ಎಲ್.ಸಂದೀಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಐ.ಎಂ.ಪೂರ್ಣೇಶ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಎಚ್.ಎಂ.ಸತೀಶ್, ಡಿ.ಕೆ.ಲಕ್ಷ್ಮಣ್‍ಗೌಡ, ಓ.ಎಸ್.ಗೋಪಾಲಗೌಡ ಮತ್ತಿತರರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version