ಒಡಿಶಾದಲ್ಲಿ ಪಿಯೊನ್ ನಿಂದಲೇ ನಡೆಯಿತು 3ನೇ ತರಗತಿಯ ದಲಿತ ಬಾಲಕಿ ಮೇಲೆ ಅತ್ಯಾಚಾರ: ಉದ್ರಿಕ್ತ ಜನರಿಂದ ಪೊಲೀಸ್ ವಾಹನಕ್ಕೆ ಬೆಂಕಿ

ಒಡಿಶಾದ ರಾಯಗಡ ಜಿಲ್ಲೆಯ 3ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆಯ ಜವಾನನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇದರಿಂದ ಕೋಪಗೊಂಡ ಸ್ಥಳೀಯರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್ ನ್ ದಂಗಸಿಲ್ ಗ್ರಾಮದ ಆಶ್ರಮ ಶಾಲೆಯಲ್ಲಿ ಎಂಟು ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜವಾನನನ್ನು ತಮ್ಮ ವಶದಿಂದ ಕರೆದುಕೊಂಡು ಹೋಗಿದ್ದಕ್ಕೆ ಸ್ಥಳೀಯರು ಪೊಲೀಸರ ವಿರುದ್ಧ ಕೋಪಗೊಂಡು ಜೀಪನ್ನು ಧ್ವಂಸಗೊಳಿಸಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಉದೇ ವೇಳೆ ಉದ್ರಿಕ್ತ ಜನಸಮೂಹವನ್ನು ಚದುರಿಸಲು ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ಕೆಲವು ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಇನ್ನು ಈ ಗ್ರಾಮದಲ್ಲಿ ಬಂಧನದ ಭಯದಿಂದ ಬಹುತೇಕ ಎಲ್ಲಾ ಪುರುಷರು ಗ್ರಾಮದಿಂದ ಪಲಾಯನ ಮಾಡಿದ್ದಾರೆ. ಆರೋಪಿ ಜವಾನನನ್ನು ಅಮಾನತುಗೊಳಿಸಲಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರಿಗೆ ಶೋಕಾಸ್ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಗಡದ ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ಅಧ್ಯಕ್ಷೆ ಬಿದುಲತಾ ಹುಯಿಕಾ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು, ಸಿಡಬ್ಲ್ಯೂಸಿ ಸದಸ್ಯರ ತಂಡದೊಂದಿಗೆ ರಾಯಗಡ ಸರ್ಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಭೇಟಿಯಾಗಿ ತಂಡವು ಅವರಿಗೆ ನ್ಯಾಯದ ಭರವಸೆ ನೀಡಿತು.