6:53 AM Wednesday 15 - October 2025

ಉತ್ತರಪ್ರದೇಶದಲ್ಲಿ ಪೊಲೀಸರ ಮೇಲೆಯೇ ಪೊಲೀಸರ ದಾಳಿ: ಕೋಟಿ ಕೋಟಿ ಸುಲಿಗೆ ದಂಧೆ ಬಹಿರಂಗ

26/07/2024

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಇಡೀ ಪೊಲೀಸ್ ಠಾಣೆಯು ಸುಲಿಗೆ ದಂಧೆಯಲ್ಲಿ ಭಾಗಿಯಾಗಿದೆ ಎಂಬ ಮಾಹಿತಿ ಪಡೆದ ನಂತರ ಪೊಲೀಸ್ ತಂಡವು ಪೊಲೀಸರ ಮೇಲೆ ದಾಳಿ ನಡೆಸಿದ ವಿಚಿತ್ರ ಘಟನೆ ನಡೆದಿದೆ. ಬಿಹಾರ ಗಡಿಯ ನರ್ಹಿ ಪ್ರದೇಶದಲ್ಲಿ ಟ್ರಕ್ ಚಾಲಕರಿಂದ ಸುಲಿಗೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಎಸ್ಪಿಯನ್ನು ವರ್ಗಾವಣೆ ಮಾಡಿದೆ. ಅಲ್ಲದೇ ಉಪ ಎಸ್ಪಿಯನ್ನು ಅಮಾನತುಗೊಳಿಸಿದೆ. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ದಾಳಿ ನಡೆಸಲಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ ಮತ್ತು ಇತರ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಲಿಗೆ ಗ್ಯಾಂಗ್ ಪ್ರತಿ ವಾಹನದಿಂದ 500 ರೂ. ಸಂಗ್ರಹಿಸುತ್ತಿತ್ತು. ಪ್ರತಿ ರಾತ್ರಿ ಸುಮಾರು 1,000 ವಾಹನಗಳು ಗಡಿಯನ್ನು ದಾಟುತ್ತವೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಭ್ರಷ್ಟ ಪೊಲೀಸರು ದಿನಕ್ಕೆ ಸುಮಾರು 5 ಲಕ್ಷ ರೂ.ಗಳನ್ನು ಮತ್ತು ತಿಂಗಳಿಗೆ ಸುಮಾರು 1.5 ಕೋಟಿ ರೂ.ಗಳನ್ನು ಸಂಗ್ರಹಿಸುತ್ತಿದ್ದರು.

ಡಿವೈಎಸ್ಪಿ ಸದರ್, ನರ್ಹಿ ಪೊಲೀಸ್ ಠಾಣೆಯ ಎಸ್ಎಚ್ಒ ಮತ್ತು ಪೊಲೀಸ್ ಹೊರಠಾಣೆಯ ಉಸ್ತುವಾರಿಯ ಆಸ್ತಿಗಳ ಬಗ್ಗೆ ವಿಚಕ್ಷಣಾ ತನಿಖೆಗೆ ಆದೇಶಿಸಲಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಬಿಹಾರದ ಗಡಿಯಲ್ಲಿ ಪೊಲೀಸ್ ಸಿಬ್ಬಂದಿ ವಾಹನಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವುದು ಬಹಿರಂಗವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಟ್ಟುನಿಟ್ಟಾಗಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಇದರ ಪರಿಣಾಮವಾಗಿ ಬಲ್ಲಿಯಾ ಪೊಲೀಸ್ ವರಿಷ್ಠಾಧಿಕಾರಿ ದೇವ್ ರಂಜನ್ ವರ್ಮಾ ಮತ್ತು ಹೆಚ್ಚುವರಿ ಎಸ್ಪಿ ದುರ್ಗಾ ಪ್ರಸಾದ್ ತಿವಾರಿ ಅವರನ್ನು ವರ್ಗಾಯಿಸಿ ನಿರೀಕ್ಷಣಾ ಪಟ್ಟಿಯಲ್ಲಿ ಇರಿಸಲಾಗಿದ್ದು, ಡಿಎಸ್ಪಿ ಸದರ್ ಶುಭ್ ಸೂಚಿತ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version