ಬೆನ್ನುಮೂಳೆಯಿಂದ ಬೇರ್ಪಟ್ಟ ತಲೆಬುರುಡೆ: ಚಾಲೆಂಜಿಂಗ್ ಆಪರೇಷನ್ ನಡೆಸಿ ಬಾಲಕನ ಜೀವ ಉಳಿಸಿದ ಇಸ್ರೇಲ್ ವೈದ್ಯರು

14/07/2023

ಬಾಲಕನೊಬ್ಬನ ಪಾಲಿಗೆ ವೈದ್ಯರು ದೇವರಾಗಿರುವ ಘಟನೆ ಇಸ್ರೇಲ್ ದೇಶದಲ್ಲಿ ನಡೆದಿದೆ. ಇಸ್ರೇಲ್‌ನ ವೈದ್ಯರು 12 ವರ್ಷದ ಬಾಲಕನಿಗೆ ಅಸಾಮಾನ್ಯವಾದ ಮತ್ತು ತೀರಾ ಸಂಕೀರ್ಣವಾಗಿದ್ದ ಆಪರೇಷನ್ ನಡೆಸಿ ಯಶಸ್ವಿಯಾಗಿದ್ದಾರೆ.
ನಡೆದದ್ದೇನು..?

ಬೈಸಿಕಲ್‌ ಓಡಿಸುತ್ತಿದ್ದ ಸುಲೇಮಾನ್ ಹಸನ್ ಎಂಬ ಬಾಲಕ ಕಾರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ. ಇದರಿಂದ ಹಸನ್ ನ ತಲೆಬುರುಡೆಯು ಬೆನ್ನುಮೂಳೆಯಿಂದ ಬೇರ್ಪಟ್ಟಿತ್ತು. ಇದನ್ನು ವೈಜ್ಞಾನಿಕವಾಗಿ ಬೈಲಾಟರಲ್ ಅಟ್ಲಾಂಟೊ ಆಸಿಪೀಟಲ್ ಜಾಯಿಂಟ್ ಡಿಸ್ಲೊಕೇಶನ್ ಎನ್ನಲಾಗುತ್ತದೆ.

ಅಪಘಾತದ ಬಳಿಕ ಸುಲೇಮಾನ್ ಹಸನ್‌ನನ್ನು ಹಡಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದಲ್ಲಿ ಸಾಗಿಸಲಾಯಿತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ್ದು ಬಳಿಕ ಮೂಳೆ ತಜ್ಞ ಓಹದ್ ಐನಾವ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ  ಕತ್ತಿನ ಬುಡದಿಂದ ಬಹುತೇಕ ಸಂಪೂರ್ಣವಾಗಿ ಬೇರ್ಪಟ್ಟಿದ್ದ ಬಾಲಕನ ತಲೆ ಬುರುಡೆಯನ್ನು ಮರುಜೋಡಣೆ ಮಾಡಲಾಯಿಗಿದೆ. ಹಲವಾರು ಗಂಟೆಗಳ  ಶಸ್ತ್ರಚಿಕಿತ್ಸೆಯ ಬಳಿಕ ಬಾಲಕ ಈಗ ಸಂಪೂರ್ಣ ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

‌ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯರು, ಇದೊಂದು ಅತ್ಯಂತ ಅಪರೂಪದ ಶಸ್ತ್ರಚಿಕಿತ್ಸೆ. ಇದಕ್ಕೆ  ವಿಶೇಷ ವೈದ್ಯರ ಅಗತ್ಯವಿರುತ್ತದೆ. ವಿಶೇಷವಾಗಿ  ಮಕ್ಕಳು ಮತ್ತು ಹದಿಹರೆಯದವರಿಗೆ ಆಪರೇಷನ್ ಮಾಡಲು ಶಸ್ತ್ರಚಿಕಿತ್ಸಕನಿಗೆ ಜ್ಞಾನ ಮತ್ತು ಅನುಭವದ ಅಗತ್ಯವಿರುತ್ತದೆ. ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಅತ್ಯಂತ ನವೀನ ತಂತ್ರಜ್ಞಾನವಿದ್ದುದರಿಂದ  ಹಾಗೂ ಇಲ್ಲಿನ ವೈದ್ಯರ ಪರಿಶ್ರಮದಿಂದ ಬಾಲಕನನ್ನು ಉಳಿಸಲು ಸಾಧ್ಯವಾಯಿತು. ಬಾಲಕ ಬದುಕುಳಿಯುವ ಸಾಧ್ಯತೆ ಕೇವಲ ಶೇ.  50ರಷ್ಟಿತ್ತು. ಅವನು ಬದುಕಿ ಬಂದಿರುವುದು ಪವಾಡ ಎಂದಿದ್ದಾರೆ.

ಶಸ್ತ್ರ ಚಿಕಿತ್ಸೆಯು ಜೂನ್ ನಲ್ಲಿ ನಡೆದಿದ್ದು ಬಾಲಕನ ಚೇತರಿಕೆಗೆ ಕಾಯುತ್ತಿದ್ದ ವೈದ್ಯರು ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಸುಲೇಮಾನ್ ಹಸನ್ ನ ಇತ್ತೀಚೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version