2:58 PM Saturday 7 - February 2026

ಟ್ರೋಲ್ ಪೇಜ್ ಗಳ ನಿಂದನೆ ಸಹಿಸಲು ಸಾಧ್ಯವಾಗದೇ ಸಾವಿಗೆ ಶರಣಾದ ಮಹಿಳೆ: ಇಬ್ಬರು ಮಕ್ಕಳು ಅನಾಥ

geethanjali
12/03/2024

ಹೈದರಾಬಾದ್:  ಟ್ರೋಲ್ ಪೇಜ್ ಗಳ ಮಾನಹಾನಿಕರ ಟ್ರೋಲ್ ನಿಂದ ಬೇಸತ್ತು ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವಿಗೆ ಶರಣಾಗಿರುವ ಘಟನೆ  ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರ ಪ್ರದೇಶ ಸರ್ಕಾರದ ‘ಜಗನಣ್ಣ ಹೌಸಿಂಗ್ ಸ್ಕೀಮ್’ ಅಡಿ ಪ್ಲಾಟ್ ಪಡೆಯುವ ಕುರಿತು ಮಾರ್ಚ್ 4ರಂದು ನಡೆದ ವೈಎಸ್‌ ಆರ್ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಗೋತಿ ಗೀತಾಂಜಲಿ ದೇವಿ ಮಾತನಾಡಿದ್ದರು.

ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಯಾಗಿರುವುದಾಗಿ ಗೋತಿ ಗೀತಾಂಜಲಿ ದೇವಿ ಹೇಳಿಕೊಂಡಿದ್ದರು. “ಇಂದು ನನ್ನ ಕನಸು ಈಡೇರಿದೆ. ನನ್ನ ಹೆಸರಿನಲ್ಲಿ ಮನೆ ನಿವೇಶನ ದೊರಕಿದೆ. ವೇದಿಕೆ ಮೇಲೆ ಇದನ್ನು ಸ್ವೀಕರಿಸುತ್ತೇನೆ ಎಂಬುದನ್ನು ನಾನು ನಿರೀಕ್ಷಿಸಿರಲಿಲ್ಲ. ಹೀಗಾಗಿ ಬಹಳ ಸಂತೋಷವಾಗಿದೆ” ಎಂದು ಗೀತಾಂಜಲಿ ಹೇಳಿದ್ದರು.

ಈ ವಿಡಿಯೋವನ್ನು ಬಳಸಿಕೊಂಡು ತೆಲುಗು ದೇಶಂ ಪಕ್ಷ (ಟಿಡಿಪಿ) ಜನ ಸೇನಾ ಪಕ್ಷದ (ಜೆಎಸ್‌ಪಿ) ಸಾಮಾಜಿಕ ಮಾಧ್ಯಮ ಘಟಕಗಳಲ್ಲಿ ಗೋತಿ ಗೀತಾಂಜಲಿ ದೇವಿ ಅವರನ್ನು ಅತ್ಯಂತ ಕೀಳುಮಟ್ಟದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ನಿರಂತರ ಟ್ರೋಲ್ ಗಳನ್ನು ಎದುರಿಸಲಾಗದೇ ಅವರು ಸಾವಿಗೆ ಶರಣಾಗಿದ್ದಾರೆ.

ಗೀತಾಂಜಲಿ ವಿರುದ್ಧ ನಡೆಸಲಾಗಿದ್ದ ಟ್ರೋಲ್ ಗಳಲ್ಲಿ ಅತ್ಯಂತ ಕೀಳು ಮಟ್ಟದ ಭಾಷೆ ಪ್ರಯೋಗ ಮಾಡಲಾಗಿತ್ತು. ಅವರ ವಿರುದ್ಧ ನಿರಂತರವಾದ ಟ್ರೋಲ್ ಗಳನ್ನು ನಡೆಸಲಾಗಿತ್ತು. ಇದರಿಂದ ಮನನೊಂದ ಅವರು, ಮಾರ್ಚ್ 7ರಂದು ತೆನಾಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ, ಜನ್ಮಭೂಮಿ ಎಕ್ಸ್‌ ಪ್ರೆಸ್ ರೈಲಿನ ಎದುರು ಜಿಗಿದಿದ್ದು, ರೈಲು ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಗುಂಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಟ್ರೋಲಿಗರಿಂದಾಗಿ ಅನ್ಯಾಯವಾಗಿ ಮಹಿಳೆಯೊಬ್ಬರ ಪ್ರಾಣವೇ ಹೋಗಿದೆ.  ಗೀತಾಂಜಲಿ ಅವರಿಗೆ ಶಾಲೆಗೆ ಹೋಗುತ್ತಿರುವ ಇಬ್ಬರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾರೆ.

ಗೀತಾಂಜಲಿ ಅವರನ್ನು ಟಾರ್ಗೆಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಂಧ್ರ ಪ್ರದೇಶ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ವಾಸವಿ ಪದ್ಮಾ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version