ಮನೆಗೆ ಮರಳಲು ಪತ್ನಿ ನಿರಾಕರಣೆ: ಮನನೊಂದ ಪತಿ ಆತ್ಮಹತ್ಯೆ..!

ಕರ್ವಾ ಚೌತ್ ಎಂಬ ವಿಶೇಷ ದಿನದಂದು ತನ್ನ ಹೆಂಡತಿಯು ತಾಯಿಯ ಮನೆಯಿಂದ ತನ್ನ ಮನೆಗೆ ಬಾರದ ಕಾರಣ ಅಸಮಾಧಾನಗೊಂಡ 24 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇಲ್ಲಿನ ಭುಟಾ ಪೊಲೀಸ್ ಠಾಣೆ ಪ್ರದೇಶದ ಗುಗಾ ಗ್ರಾಮದ ನಿವಾಸಿ ಪ್ರಮೋದ್ ಕುಮಾರ್ ರಾತ್ರಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮೋದ್ ಅವರ ಪತ್ನಿ ಪ್ರೀತಿ ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಅವರ ಅಜ್ಜ ಬಾಬುರಾಮ್ ತಿಳಿಸಿದ್ದಾರೆ.
ಕರ್ವಾ ಚೌತ್ ದಿನದಂದು ಪತ್ನಿ ಪ್ರೀತಿ ಮನೆಗೆ ಮರಳುವ ಬಗ್ಗೆ ಮೃತ ವ್ಯಕ್ತಿಯು ತಮ್ಮ ಅತ್ತೆಯೊಂದಿಗೆ ದೂರವಾಣಿಯಲ್ಲಿ ವಾಗ್ವಾದ ನಡೆಸಿದ್ದರು. ನಂತರ ರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಕುಟುಂಬ ಸದಸ್ಯರು ಬೆಳಿಗ್ಗೆ ಪ್ರಮೋದ್ ಅವರ ಕೋಣೆಯ ಬಾಗಿಲು ಒಡೆದು ನೋಡಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಬಾಬುರಾಮ್ ಹೇಳಿದ್ದಾರೆ.
ದೇಶದ ಹಲವಾರು ಭಾಗಗಳಲ್ಲಿ ಆಚರಿಸಲಾದ ಕರ್ವಾ ಚೌತ್ ದಿನದಂದು ಮಹಿಳೆಯರು ತಮ್ಮ ಗಂಡಂದಿರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ.