ಅಮಾನುಷ: ಛತ್ತೀಸ್ ಗಢದಲ್ಲಿ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ನಾಯಕನ ಪುತ್ರ ಸೇರಿ 10 ಮಂದಿಯ ಬಂಧನ

ಛತ್ತೀಸ್ ಗಢದ ರಾಯ್ ಪುರದಲ್ಲಿ ರಕ್ಷಾ ಬಂಧನವನ್ನು ಆಚರಿಸಿ ಹಿಂದಿರುಗುತ್ತಿದ್ದ ಸಹೋದರಿಯರಾದ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹತ್ತು ದಾಳಿಕೋರರ ಗುಂಪು ಬಲವಂತವಾಗಿ ಅವರನ್ನು ಹಿಡಿದು ಅಮಾನುಷ ಕೃತ್ಯ ಎಸಗಿದೆ.
ಪೊಲೀಸರ ಪ್ರಕಾರ, ಮೂವರು ಆರೋಪಿಗಳು ಮೊದಲು ಅವರನ್ನು ತಡೆದಿದ್ದಾರೆ. ಈ ಮೂವರು ನಗದು ಮತ್ತು ಮೊಬೈಲ್ ಫೋನ್ ಗಳನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಇತರ ಏಳು ಆರೋಪಿಗಳು ನಾಲ್ಕು ಮೋಟಾರ್ ಸೈಕಲ್ ಗಳಲ್ಲಿ ಸ್ಥಳಕ್ಕೆ ತಲುಪಿದ್ದಾರೆ. ಈ ಮಧ್ಯೆ ಆರೋಪಿಗಳು ಇಬ್ಬರು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರು ಹುಡುಗಿಯರೊಂದಿಗೆ ಬಂದ ವ್ಯಕ್ತಿಯನ್ನು ಸಹ ತೀವ್ರ ದೈಹಿಕ ಹಿಂಸೆಗೆ ಒಳಪಡಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕನ ಮಗ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು ಸೇರಿದ್ದಾರೆ. ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪೂನಂ ಠಾಕೂರ್ ಇತ್ತೀಚೆಗೆ ಆಗಸ್ಟ್ 2023 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪೂನಂ ಠಾಕೂರ್ ಸ್ಥಳೀಯ ಬಿಜೆಪಿ ನಾಯಕ ಲಕ್ಷ್ಮಿ ನಾರಾಯಣ್ ಸಿಂಗ್ ಅವರ ಪುತ್ರ.