ರೋಡ್ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆತ: ಜಗನ್ ಎಡಗಣ್ಣಿಗೆ ಗಾಯ

ವಿಜಯವಾಡ (ಆಂಧ್ರ ಪ್ರದೇಶ): ಚುನಾವಣಾ ರೋಡ್ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ (Andhra CM Jagan Mohan Reddy) ಅವರ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಎಡಗಣ್ಣಿನ ಮೇಲ್ಭಾಗದಲ್ಲಿ ತೀವ್ರ ಗಾಯವಾಗಿರುವ ಘಟನೆ ವಿಜಯವಾಡದಲ್ಲಿ (Vijayawada) ನಡೆದಿದೆ.
ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವೈಎಸ್ ಆರ್ ಸಿಪಿ ವತಿಯಿಂದ “ಮೇಮಂತಾ ಸಿದ್ಧಂ” ಎಂಬ ಚುನಾವಣಾ ಯಾತ್ರೆಯ (Election Campaign) ವೇಳೆ ಬಸ್ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ. ಕ್ಯಾಟ್ ಬಾಲ್ ಮೂಲಕ ಸಿಎಂ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜಗನ್ ಅವರ ಹಣೆಗೆ ಗಾಯವಾಗುತ್ತಿದ್ದಂತೆ ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಪಂದಿಸಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿ ರೋಡ್ ಶೋ ಮುಂದುವರಿಸಿದ್ದಾರೆ. ಸಿಎಂ ಜಗನ್ ಅವರ ಪಕ್ಕದಲ್ಲಿದ್ದ ಶಾಸಕ ವೆಲ್ಲಂಪಳ್ಳಿ ಅವರ ಎಗಣ್ಣಿಗೂ ಗಾಯವಾಗಿದೆ ಎಂದು ವರದಿಯಾಗಿದೆ. ವಿಜಯವಾಡದಲ್ಲಿ ಶನಿವಾರ (ಏಪ್ರಿಲ್ 13) ಮೂರೂವರೆ ಗಂಟೆಗಳ ಕಾಲ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಿತು. ಸದ್ಯ ಆಂಧ್ರ ಸಿಎಂ ಮೇಲಿನ ದಾಳಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ರಾಜಕೀಯ ಪಕ್ಷಗಳ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಇದು ಟಿಡಿಪಿ ನಾಯಕರ ಕೃತ್ಯ ಎಂದ ವೈಸಿಪಿ:
ಇನ್ನು ಇದೇ ವಿಚಾರವಾಗಿ ಆಡಳಿತ ಪಕ್ಷದ ವೈಎ ಸ್ಆರ್ ಸಿಪಿ ಮತ್ತು ಟಿಡಿಪಿ ನಾಯಕರ ನಡುವೆ ಮಾತಿನ ಸಮರವೇ ನಡೆಯುತ್ತಿದೆ. ಸಿಎಂ ಜಗನ್ ಅವರಿಗೆ ಬರುತ್ತಿರುವ ಜನಬೆಂಬಲವನ್ನು ಸಹಿಸಲಾಗದೆ ತೆಲುಗು ದೇಶಂ ಪಾರ್ಟಿ–ಟಿಡಿಪಿಯವರು ದಾಳಿ ನಡೆಸಲು ನಿರ್ಧರಿಸಿದ್ದಾರೆ ಎಂದು ವಿಜಯವಾಡದ ವೈಎಸ್ ಆರ್ ಸಿಪಿ ನಾಯಕರು ಆರೋಪಿಸಿದ್ದಾರೆ.
ಟಿಡಿಪಿ ನಾಯಕರೇ ಸಿಎಂ ಜಗನ್ ಮೇಲೆ ದಾಳಿ ಮಾಡಿಸಿದ್ದಾರೆ. ಮೇಮಂತಾ ಸಿದ್ಧಂ ಯಾತ್ರೆಯ ಜನಪ್ರಿಯತೆಯನ್ನು ಸಹಿಸಲಾಗದ ಟಿಡಿಪಿ ಗುಂಪುಗಳು ಹೇಡಿತನದ ಕೃತ್ಯಗಳಿಗೆ ಮುಂದಾಗಿವೆ ಎಂದು ವೈಸಿಪಿ ಸಾಮಾಜಿಕ ಜಾಲತಾಣದ ಘಟಕವು ಟೀಕಿಸಿದೆ.
ವೈಎಸ್ ಆರ್ ಸಿಪಿ ಕಾರ್ಯಕರ್ತರು ಸಂಯಮದಿಂದ ವರ್ತಿಸಬೇಕು ಎಂದು ಸಲಹೆ ನೀಡಿದೆ. ಮೇ 13 ರಂದು ರಾಜ್ಯದ ಜನತೆ ಇದಕ್ಕೆಲ್ಲಾ ಉತ್ತರ ನೀಡಲಿದ್ದಾರೆ ಎಂದು ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth