5:47 AM Wednesday 27 - August 2025

ಅಯೋಧ್ಯೆಯ ಹೆಸರಿಗೆ ಬೆಂಕಿಯಿಟ್ಟ ಬಿಜೆಪಿ ಕಾರ್ಯಕರ್ತ!

bjp
10/06/2024

ಅಯೋಧ್ಯೆ: ಶ್ರೀರಾಮನ ಜನ್ಮಸ್ಥಾನ ಎಂದು ಕರೆಯಲ್ಪಡುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಈ ಸೋಲನ್ನು ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.‌ ಹೀಗಿರುವಾಗ ಕೆಲವು ಬಿಜೆಪಿ ಕಾರ್ಯಕರ್ತರು ಅಯೋಧ್ಯೆ ಜನರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಹುಚ್ಚಾಟ ಮೆರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಿಜೆಪಿ ಪಕ್ಷದ ಲಲ್ಲೂ ಸಿಂಗ್‌  ಅಯೋಧ್ಯೆಯ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇವರ ಹೀನಾಯ ಸೋಲಿಗೆ  ಬಿಜೆಪಿ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಶ್ರೀರಾಮನಿಗೆ ಭವ್ಯವಾದ ಮಂದಿರ ಕಟ್ಟಿಸಿಕೊಟ್ಟರೂ ಬಿಜೆಪಿಗೆ ಅಯೋಧ್ಯೆಯಲ್ಲೇ ಸೋಲಾಗಿದೆ ಎಂದು ಬೇಸರ. ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಕಷ್ಟು ಜನರು ಅಯೋಧ್ಯೆ ಜನರನ್ನು ನಿಂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನು ಕೆಲವರಂತೂ ಶ್ರೀರಾಮನನ್ನೇ ನಿಂದಿಸಿ, ಇನ್ನು ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಬಿಜೆಪಿ ಪಕ್ಷದ ಶಾಲು ಧರಿಸಿದ ವ್ಯಕ್ತಿಯೋರ್ವ ಅಯೋಧ್ಯೆ ಎಂದು ಬರೆದು ಆ ಊರಿನ ಹೆಸರಿಗೆ ಬೆಂಕಿ ಹಚ್ಚಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಅಯೋಧ್ಯೆ ಜನರ ಮೇಲೆ ಹಿಂಸೆ ನಡೆಸಲು ಪ್ರೇರೇಪಿಸುವಂತಿದೆ. ಸದ್ಯ ಆತನ ವಿರುದ್ಧ ಕ್ರಮಕ್ಕೆ ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ.

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಸಂದರ್ಭದಲ್ಲಿ ತೆರವು ಕಾರ್ಯಾಚರಣೆಯಲ್ಲಿ ಸಾಕಷ್ಟು ಜನರು ಬೀದಿಗೆ ಬಂದಿದ್ದಾರೆ ಎನ್ನುವ ವರದಿಗಳಿವೆ. ಇದರಿಂದ ನೊಂದ ಜನರು ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ವೈಯಕ್ತಿಕ ಆಯ್ಕೆಯಾಗಿದೆ. ಅಯೋಧ್ಯೆಯಲ್ಲಿ ಬಿಜೆಪಿಗೆ ಯಾಕೆ ಸೋಲಾಯಿತು ಅನ್ನೋದನ್ನು ಬಿಜೆಪಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಮತ್ತು ಆದ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕೇ ಹೊರತು, ತಮ್ಮ ವಿರುದ್ಧ ಮತ ಚಲಾಯಿಸಿದ ಮತದಾರರನ್ನು ದ್ವೇಷಿಸುವುದಲ್ಲ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version