ಭಾರತದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ, ವಿದೇಶಕ್ಕೆ ಹೋದ್ರೆ ಡಸ್ಟ್‌ ಬಿನ್ ಹುಡುಕುತ್ತಾರೆ:  ಭಾರತೀಯರ ಸಿವಿಕ್ ಸೆನ್ಸ್ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ತರಾಟೆ

garbage is everywhere in india
01/08/2026

ಮುಂಬೈ / ನವದೆಹಲಿ:  ಭಾರತದಲ್ಲಿ ಎಲ್ಲೆಂದರಲ್ಲಿ ಕಸ ಎಸೆದು, ವಿದೇಶಕ್ಕೆ ಹೋದಾಗ ಮಾತ್ರ ಕಟ್ಟುನಿಟ್ಟಾಗಿ ನೈರ್ಮಲ್ಯ ನಿಯಮಗಳನ್ನು ಪಾಲಿಸುವ ನಾಗರಿಕರ ದ್ವಂದ್ವ ನೀತಿಯನ್ನು ಬಾಂಬೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಮಹಾನಗರ ಪಾಲಿಕೆ ಅಧಿಕಾರಿಗಳು ದಾಕ್ಷಿಣ್ಯವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಮುಂಬೈನ ಕಂಜುರ್‌ ಮಾರ್ಗ್ ತ್ಯಾಜ್ಯ ವಿಲೇವಾರಿ ಪ್ರದೇಶದಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ, ದುರ್ನಾತ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಎಸ್. ಕುಲಕರ್ಣಿ ಹಾಗೂ ನ್ಯಾಯಮೂರ್ತಿ ಆರತಿ ಸಾಠೆ ಅವರಿದ್ದ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.


ಹೈಕೋರ್ಟ್ ಹೇಳಿದ್ದೇನು?

“ನಮ್ಮ ದೇಶದಲ್ಲಿ ಕಣ್ಣು ಮುಚ್ಚಿ ರಸ್ತೆಗೆ ಕಸ ಎಸೆಯುವ ಜನರೇ, ವಿದೇಶಕ್ಕೆ ಹೋದ ತಕ್ಷಣ ಸಣ್ಣ ಚಾಕೊಲೇಟ್ ಸಿಪ್ಪೆಯನ್ನೂ ಹುಡುಕಿ ಡಸ್ಟ್‌ ಬಿನ್‌ ಗೆ ಹಾಕುತ್ತಾರೆ. ಇದು ನಾವು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ನೀಡುತ್ತಿರುವ ಬೆಲೆಯೇ?” ಎಂದು ನ್ಯಾಯಪೀಠ ಪ್ರಶ್ನಿಸಿತು.


“ಪ್ರತಿಯೊಬ್ಬ ನಾಗರಿಕನೂ ಸ್ವಚ್ಛ ಪರಿಸರವನ್ನು ಬಯಸುತ್ತಾನೆ. ಆದರೆ ಅದಕ್ಕೆ ಪ್ರತಿಯಾಗಿ ಸಮಾಜದ ಬಗ್ಗೆ ತನ್ನ ಮೂಲಭೂತ ಕರ್ತವ್ಯ(Civic Sense)ವನ್ನು ಪಾಲಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳನ್ನು ಕಸದ ತೊಟ್ಟಿಗಳನ್ನಾಗಿ ಮಾಡುವುದನ್ನು ತಡೆಯಲು ಬಿಎಂಸಿ (MCGM) ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಪೀಠ ತಿಳಿಸಿತು.

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಳವಳ:

ಮುಂಬೈನ ಸುಂದರ ಕಡಲತೀರಗಳು ಮತ್ತು ಸಣ್ಣ ಗಲ್ಲಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, “ಇದು ನಾಗರಿಕ ಸಮಾಜದ ಲಕ್ಷಣವೇ?” ಎಂದು ಬೇಸರ ವ್ಯಕ್ತಪಡಿಸಿತು.

ರಾಜಾಬಾಯಿ ಟವರ್ ಹಾಗೂ ಬಾಂಬೆ ಹೈಕೋರ್ಟ್ ಕಟ್ಟಡದಂತಹ ಐತಿಹಾಸಿಕ ಸ್ಥಳಗಳ ಸುತ್ತಮುತ್ತಲೂ ತ್ಯಾಜ್ಯ ನಿರ್ವಹಣೆ ಸರಿ ಇಲ್ಲದಿರುವುದನ್ನು ಬೆಟ್ಟು ಮಾಡಿದ ನ್ಯಾಯಾಲಯ, ವಿದೇಶಿ ಪ್ರವಾಸಿಗರ ಮುಂಭಾಗದಲ್ಲಿ ಇದು ನಗರದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿತು.

ಪಾಲಿಕೆಗೆ ಒಂದು ವಾರದ ಗಡುವು:

ಬೃಹನ್ಮುಂಬೈ ಮಹಾನಗರ ಪಾಲಿಕೆಯ (MCGM) ‘ಸ್ವಚ್ಛ ಮುಂಬೈ, ಸುಂದರ ಮುಂಬೈ’ ಘೋಷಣೆ ಶ್ಲಾಘನೀಯವಾಗಿದ್ದರೂ, ಸಾರ್ವಜನಿಕರ ಜವಾಬ್ದಾರಿರಹಿತ ವರ್ತನೆ ಮತ್ತು ಅಧಿಕಾರಿಗಳ ಸಡಿಲ ಜಾರಿಯಿಂದಾಗಿ ಅದು ವಿಫಲವಾಗುತ್ತಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಒಂದು ವಾರದೊಳಗೆ ಸಾರ್ವಜನಿಕ ರಸ್ತೆಗಳಲ್ಲಿ ಕಸ ಚೆಲ್ಲುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಕಠಿಣ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:       

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version