ಉಡುಪಿ: ಇನ್ನೂ ಸಿಗದ ಹಂತಕನ ಸುಳಿವು | ನಾಲ್ಕು ಬಾರಿ ವಾಹನ ಬದಲಿಸಿ ಹಂತಕ ಪರಾರಿ?

udupi
14/11/2023

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯ ಬಂಧನ ಇನ್ನೂ ಸಾಧ್ಯವಾಗಿಲ್ಲ. ಆರೋಪಿಯು ಪೊಲೀಸರಿಗೆ ಕೇವಲ ಸಿಸಿ ಕ್ಯಾಮರಾ ದೃಶ್ಯವೊಂದು ಬಿಟ್ಟರೆ ಬೇರಾವ ಸುಳಿವನ್ನೂ ನೀಡಿಲ್ಲ.

ನವೆಂಬರ್ 12ರಂದು ಹಂತಕ ಉಡುಪಿಯ ಸಂತೆಕಟ್ಟೆಯಿಂದ ತೃಪ್ತಿ ಲೇಔಟ್ ಬಳಿಗೆ ಆಟೋವೊಂದರಲ್ಲಿ ಬಂದಿದ್ದಾನೆ. ಬಳಿಕ ನೇಜಾರು ತೃಪ್ತಿ ಲೇಔಟ್ ನಿವಾಸಿಗಳಾದ ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22) ಮತ್ತು ಅಯ್ನಾಝ್(20) ಪುತ್ರ ಅಸೀಮ್(12) ಇವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಆರೋಪಿ ಸಾಕಷ್ಟು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದಾನೆ. ಆದ್ರೆ, ಆರೋಪಿಯ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ವರದಿಗಳ ಪ್ರಕಾರ ಆರೋಪಿ ಉಡುಪಿ ನಗರದೊಳಗೆ ನಾಲ್ಕು ಬಾರಿ ವಾಹನ ಬದಲಿಸಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಹಿಡಿಯಲು ತನಿಖೆ ಮುಂದುವರಿಸಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಆರೋಪಿ ಎಸ್ಕೇಪ್ ಆಗಿರುವ ಸಾಧ್ಯತೆಗಳ ಹಿನ್ನೆಲೆಯಲ್ಲೂ ತನಿಖೆ ಮುಂದುವರಿದಿದೆ.

ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿ ಬಹಳ ವ್ಯವಸ್ಥಿತವಾಗಿ ಕೊಲೆ ನಡೆಸಿ ಪರಾರಿಯಾಗಿದ್ದಾನೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆಸಲಾಗಿದೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಇನ್ನೊಂದೆಡೆ ಕೊಲೆಯಾಗಿರುವ ಅಯ್ನಾಸ್ ಮತ್ತು ಅಫ್ನಾನ್ ಅವರ ಕಾಲ್ ಡೀಟೈಲ್ಸ್ ಆಧಾರದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಆರೋಪಿಯು ಹತ್ಯೆ ನಡೆಸಲು ಸಾಕಷ್ಟು ಚಾಣಾಕ್ಷತನ ಮೆರೆದಿದ್ದಾನೆ. ಹೀಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version