ಕೋಮುವಾದ ನಿಗ್ರಹಕ್ಕೆ ಕಾಂಗ್ರೆಸ್ ನೀಡಿದ ಮಹತ್ವ ಅಸ್ಪೃಶ್ಯತೆ ನಿವಾರಣೆಗೆ ಯಾಕಿಲ್ಲ?: ಸಮುದಾಯವೊಂದರ ಆತ್ಮಗೌರವಕ್ಕಿಂತಲೂ ಅಶ್ಲೀಲ ಗಾದೆಯೇ ಶ್ರೇಷ್ಠವೇ?

ಬೆಂಗಳೂರು: ನಟ ಉಪೇಂದ್ರ ಅವರು ನೀಡಿರುವ ಹೇಳಿಕೆ ವಿರುದ್ಧ ರಾಜ್ಯ ಸರ್ಕಾರ ಸರಿಯಾದ ಕಾನೂನು ಕ್ರಮಕೈಗೊಳ್ಳದೇ ಮೌನವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರ ಕೋಮುವಾದ ನಿಗ್ರಹಕ್ಕೆ ನೀಡಿದಷ್ಟು ಮಹತ್ವವನ್ನು ಅಸ್ಪೃಷ್ಯತೆ ನಿವಾರಣೆಗೆ ನೀಡ್ತಾ ಇಲ್ಲ ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿದೆ. ನೈತಿಕ ಪೊಲೀಸ್ ಗಿರಿ ನಿಲ್ಲಿಸಲು ಸರ್ಕಾರ ಆ್ಯಂಟಿ ಕಮ್ಯುನಲ್ ವಿಂಗ್ ರಚಿಸಿದೆ. ಆದ್ರೆ, ಅಸ್ಪೃಷ್ಯತೆ ನಿಗ್ರಹಿಸಲು ಕಟ್ಟುನಿಟ್ಟಿನ ಕಾನೂನುಗಳಿದ್ದರೂ, ಇಂತಹ ಪ್ರಕರಣಗಳ ಗಂಭೀರತೆಯನ್ನು ಗೌರವಾನ್ವಿತ ನ್ಯಾಯಾಲಯದ ಗಮನಕ್ಕೆ ತರುವಲ್ಲಿ ಸರ್ಕಾರ ಸೋತಿದೆ ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಊರು ಇದ್ದಲ್ಲಿ **ಗೇರಿ ಇದ್ದೇ ಇರುತ್ತದೆ ಎಂಬ ಮಾತನ್ನಷ್ಟೇ ಉಪೇಂದ್ರ ಅವರು ಆಡಿಲ್ಲ, ಅವರ ಮಾತಿನಲ್ಲಿ ಇಂತಹವರೂ ಇರುತ್ತಾರೆ ಎಂಬಂತಹ ಉಲ್ಲೇಖಗಳಿವೆ, ಒಂದು ಸಮುದಾಯದ ಆತ್ಮಗೌರವಕ್ಕಿಂತ ಗಾದೆ ಮಾತುಗಳೇ ಶ್ರೇಷ್ಠವೇ? ಎನ್ನುವ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿದೆ.
ಕೇವಲ ಉಪೇಂದ್ರ ಅವರ ಹೇಳಿಕೆ ಮಾತ್ರವಲ್ಲದೇ ಕಾಂಗ್ರೆಸ್ ಸಚಿವರೊಬ್ಬರು ಸೇರಿದಂತೆ ಸಾಕಷ್ಟು ಜನರು ಈ ಗಾದೆ ಮಾತನ್ನು ಉಲ್ಲೇಖಿಸಿ, ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ಬರುವಂತಹ ಮಾತುಗಳನ್ನಾಡಿದ್ದಾರೆ. ಆ ಎಲ್ಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಂತಹವರ ವಿರುದ್ಧ ಎಸ್ ಸಿ, ಎಸ್ ಟಿ ದೌರ್ಜನ್ಯ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.