ಮುಕ್ತ ವಿಶ್ವ ವಿದ್ಯಾಲಯ ಪ್ರಶ್ನೆ ಪತ್ರಿಕೆ ಮಾರಾಟ ಜಾಲ ಬೆಳಕಿಗೆ: ಇಬ್ಬರು ವಶಕ್ಕೆ

crime
27/09/2023

ಚಾಮರಾಜನಗರ: ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದ್ದು ಚಾಮರಾಜನಗರ ಪ್ರಾದೇಶಿಕ ಕೇಂದ್ರದಿಂದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮುಕ್ತವಿವಿ ಚಾಮರಾಜನಗರ ಪ್ರಾದೇಶಿಕ ಕೇಂದ್ರದ ಇಬ್ಬರು ಹಂಗಾಮಿ ನೌಕರರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ‌.‌ ಮೈಸೂರು ಜಿಲ್ಲೆಯ ವಿದ್ಯಾರ್ಥಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪರೀಕ್ಷೆ ಹಿಂದಿನ ದಿನ ಪ್ರಶ್ನೆ ಪತ್ರಿಕೆಗಳನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿ ಹಣವನ್ನು  ಪಡೆಯುತ್ತಿದ್ದ ಜಾಲವನ್ನು ಬೆಳಕಿಗೆ ತಂದಿದ್ದಾರೆ.

ಚಾಮರಾಜನಗರ ಪ್ರಾದೇಶಿಕ ಕೇಂದ್ರದ ನೌಕರರು ವಾಟ್ಸಾಪ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದ್ದು ಆನ್ ಲೈನ್ ಮೂಲಕ ಹಣ ಪಡೆದ ಇವರು ಮತ್ತೊಬ್ಬರಿಗೆ ಹಣ ಸಂದಾಯ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಬಿಕಾಂ ಅಂತಿಮ‌ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವಾಗ ವಿದ್ಯಾರ್ಥಿ ಗಮನಿಸಿ ಮೈಸೂರಿನ ಜಯಲಕ್ಷ್ಮಿಪುರಂ ಠಾಣೆಗೆ ದೂರು ಕೊಟ್ಟಿದ್ದ, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಪ್ರಾದೇಶಿಕ ನಿರ್ದೇಶಕರ ಕಣ್ತಪ್ಪಿಸಿ ಇವರು‌ ಪ್ರಶ್ನೆ ಪತ್ರಿಕೆ ಹೇಗೆ ಕದಿಯುತ್ತಿದ್ದರು, ಗೌಪ್ಯತೆ ಪಾಲಿಸುತ್ತಿರಲಿಲ್ಲವೇ ಎಂಬಿತ್ಯಾದಿ ಅನುಮಾನ ಮೂಡಿರುವ ಜೊತೆಗೆ ನೌಕರಿ ಮಾಡಿ ಕಷ್ಟಪಟ್ಟು ಓದುವ ಹಲವರಿಗೆ ಇದರಿಂದ ಅನ್ಯಾಯವೂ ಆಗುತ್ತಿದೆ.

 

ಇತ್ತೀಚಿನ ಸುದ್ದಿ

Exit mobile version