ಹೊಸ ರಗಳೆ: ಅನರ್ಹತೆ ನಂತರ ರಾಹುಲ್ ಗಾಂಧಿಗೆ ಸದಸ್ಯತ್ವ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಇತ್ತೀಚಿಗೆ ಸಂಸತ್ ನಿಂದ ಅನರ್ಹಗೊಂಡು ಕೊನೆಗೂ ಮತ್ತೆ ಸದಸ್ಯತ್ವ ಪಡೆದ ರಾಹುಲ್ ಗಾಂಧಿಗೆ ಇದೀಗ ಹೊಸ ತಲೆನೋವು ಶುರುವಾಗಿದೆ. ರಾಹುಲ್ ಗಾಂಧಿಗೆ ಲೋಕಸಭೆ ಕಾರ್ಯದರ್ಶಿಗಳು ಮತ್ತೆ ಸಂಸತ್ ಸದಸ್ಯತ್ವವನ್ನು ನೀಡಿರುವುದನ್ನು ಪ್ರಶ್ನಿಸಿ ವಕೀಲ ಅಶೋಕ್ ಪಾಂಡೆ ಎಂಬುವವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಒಮ್ಮೆ ಜನಪ್ರತಿನಿಧಿಗಳು ಕಾನೂನಿನ ಕಾರ್ಯಾಚರಣೆಯಿಂದ ತಮ್ಮ ಸದಸ್ಯತ್ವವನ್ನು ಕಳೆದುಕೊಂಡ್ರೆ ಅವರು ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಸಂಸದರಾಗಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಈ ಮನವಿಯಲ್ಲಿ ತಿಳಿಸಲಾಗಿದೆ. ಶಿಕ್ಷೆಗೊಳಗಾದ ಶಾಸಕರ ಸದಸ್ಯತ್ವವನ್ನು ಕಳೆದುಕೊಳ್ಳುವ ಕುರಿತು ಅಧಿಸೂಚನೆಯನ್ನು ಸಂಬಂಧಪಟ್ಟ ಸದನದ ಅಧ್ಯಕ್ಷರು/ಸ್ಪೀಕರ್ ಅವರು ಸೂಚಿಸುತ್ತಾರೆಯೇ..? ಇದು ಭಾರತದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದಾಗಿದೆಯೇ ಎಂದು ಅರ್ಜಿಯಲ್ಲಿ ಕೇಳಲಾಗಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆ ನೀಡಿತ್ತು. ಹೀಗಾಗಿ ಅವರು ಸಂಸದ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ, ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸಂಸದ ಸ್ಥಾನವನ್ನು ನೀಡಲಾಗಿತ್ತು.