ಸರ್ವೇ ನಡೆಸಲು ಬಂದ ಯಮ—ಚಿತ್ರಗುಪ್ತ: ರಸ್ತೆ ಗುಂಡಿಗಳ ಅಳತೆ, ಪಾಪ ಪುಣ್ಯಗಳ ಲೆಕ್ಕ!

ಕೊಟ್ಟಿಗೆಹಾರ: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತಿದ್ಯೋ ಇಲ್ವೋ ಎಂದು ಚೆಕ್ ಮಾಡಲು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ ಭೇಟಿ ನೀಡಿದ್ದು, ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮಕ್ಕೆ ಆಗಮಿಸಿದ್ದಾರೆ.
ರಾಜ್ಯಾದ್ಯಂತ ರಸ್ತೆಗಳು ತೀವ್ರ ಗುಂಡಿ ಬಿದ್ದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ, ಮಲೆನಾಡ ನಿರಂತರ ಮಳೆಯಿಂದ ಯಮರಾಜ–ಚಿತ್ರಗುಪ್ತ ಮಲೆನಾಡ ರಸ್ತೆಗಳ ಬಗ್ಗೆ ಅಧ್ಯಯನ ನಡೆಸಿ, ಸರ್ಕಾರದ ಗಮನ ಸೆಳೆಯಲು ಮಲೆನಾಡಿಗೆ ಆಗಮಿಸಿದ್ದು ಜನರಿಂದ ಮಾಹಿತಿ ಪಡೆದು ಚಿತ್ರಗುಪ್ತರ ಬಳಿ ಎಲ್ಲರ ಲೆಕ್ಕ ಬರೆಸಿದ್ದಾರೆ. ಮೂಡಿಗೆರೆ ತಾಲೂಕಿನ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ನಿಡುವಾಳೆ ಸುತ್ತಮುತ್ತ ರಸ್ತೆಯಲ್ಲಿ ಸಂಚಿರಿಸಿ ರಸ್ತೆಯಲ್ಲಿನ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ.
ರಸ್ತೆಯಲ್ಲಿನ ಗುಂಡಿಗಳನ್ನ ಕಂಡ ಯಮರಾಜ ಚಿತ್ರಗುಪ್ತನ ಬಳಿ ಎಲ್ಲಾ ಪಾಪ–ಪುಣ್ಯಗಳ ಲೆಕ್ಕ ಬರೆಸಿದ್ದಾರೆ. ಜೊತೆಗೆ ಹಳ್ಳಿಗಳ ಸೊಸೈಟಿಗೆ ತೆರಳಿದ್ದ ಯಮರಾಜ–ಚಿತ್ರಗುಪ್ತರು ಸೊಸೈಟಿಯಲ್ಲಿ ಅಕ್ಕಿಯನ್ನೂ ಚೆಕ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಕ್ಕಿ ಚೀಲದ ಆಳಕ್ಕೆ ಕೈಹಾಕಿ ಅಕ್ಕಿ ಕ್ವಾಲಿಟಿ ಬಗ್ಗೆಯೂ ತಪಾಸಣೆ ನಡೆಸಿದ್ದಾರೆ.
ಜೊತೆಗೆ ವಾಹನಗಳನ್ನ ಚಾಲನೆ ಮಾಡುವಾಗ ಮದ್ಯಸೇವಿಸಿ ಚಾಲನೆ ಮಾಡುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಯುವಜನತೆ ಪ್ರಾಣ ಕೂಡ ಕಳೆದುಕೊಳ್ಳುತ್ತಿರುವುದರಿಂದ ರಸ್ತೆಯಲ್ಲಿ ನಿಂತ ಯಮ-ಚಿತ್ರಗುಪ್ತ ಯುವಜನತೆಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಯಾರೂ ನನ್ನ ಬಳಿ ಬರಬೇಡಿ ಎಂದು ಜಾಗೃತಿ ಮೂಡಿಸಿದ್ದಾರೆ.
ಆಗ ನಿಡುವಾಳೆ ಗ್ರಾಮದ ಜನ ರಸ್ತೆ ತುಂಬಾ ಹಾಳಾಗಿದೆ. ನಾವು ಮದ್ಯಸೇವಿಸದೆ ವಾಹನ ಚಾಲನೆ ಮಾಡಿದರೂ ಗುಂಡಿಗಳಿಗೆ ಬಿದ್ದು ಜನ ಸಾಯ್ತಿದ್ದಾರೆ, ಕೆಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ ಎಂದು ಯಮರಾಜನಿಗೆ ತಮ್ಮೂರಿನ ರಸ್ತೆ ಬಗ್ಗೆ ಹಾಸ್ಯಚಟಾಕಿ ಹಾರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD