ರಸ್ತೆಗೆ ಕೆಸರು ಮಿಶ್ರಿತ ನೀರು: ತೊಂದರೆ ಸರಿಪಡಿಸಲು ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಪಾಲಿಕೆ ಆಯುಕ್ತರಿಗೆ ಮನವಿ

ಮಂಗಳೂರು: ಬಜಾಲ್ ಜಲ್ಲಿಗುಡ್ಡೆ ಮುಖ್ಯರಸ್ತೆ ಬಳಿಯ ಗುಡ್ಡವೊಂದರಿಂದ ಕೆಸರು ಮಿಶ್ರಿತ ಮಳೆ ನೀರು ಹರಿದು ಬರುವುದರಿಂದ ಆಗುವ ತೊಂದರೆ ಸರಿಪಡಿಸಲು ಒತ್ತಾಯಿಸಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯಿಂದ ಇಂದು ಮನವಿ ಸಲ್ಲಿಸಲಾಯಿತು.
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಡುವ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಮುಖ್ಯರಸ್ತೆಯ ಬಳಿ ಗುಡ್ಡದಂತಿರುವ ಜಾಗವೊಂದರಿಂದ ಪ್ರತೀ ವರುಷ ಮಳೆಗಾಲದ ವೇಳೆ ಕೆಸರು ಮಿಶ್ರಿತ ನೀರು ಹರಿದು ಬಂದು ರಸ್ತೆಯುದ್ದಕ್ಕೂ ಹರಡಿ ರಸ್ತೆಯಲ್ಲಿ ಸಾಗುವ ನಾಗರಿಕರ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಮಳೆಗಾಲದಲ್ಲಿ ರಭಸವಾಗಿ ಬೀಳುವ ಮಳೆಯಿಂದ ಗುಡ್ಡದ ಮಣ್ಣು ಕರಗಿ ಕೆಸರು ರೂಪದಲ್ಲಿ ಹರಿದು ಮುಖ್ಯ ರಸ್ತೆ ಸಹಿತ, ತೋಡು, ಚರಂಡಿ ಎಲ್ಲೆಂದರಲ್ಲೂ ಶೇಖರಣೆಗೊಂಡು ಜಲ್ಲಿಗುಡ್ಡೆ ಮುಖ್ಯರಸ್ತೆಯಾದ್ಯಂತ ಕೆಸರು ತುಂಬಿ ಜನಸಾಮಾನ್ಯರಿಗೆ ನಡೆದಾಡಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿ ಬಹಳಷ್ಟು ತೊಂದರೆಗೆ ಸಿಲುಕಿರುತ್ತಾರೆ.
ಈ ಗುಡ್ಡ ಯಾರದೋ ಖಾಸಗಿ ವ್ಯಕ್ತಿಗಳಿಂದ ಸೇರಿದ ಜಾಗವಾಗಿರೋದರಿಂದ ಈವರೆಗೂ ಇದರಿಂದಾಗುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ. ಸಡಿಲ ಮಣ್ಣು ತುಂಬಿರುವ ಈ ಗುಡ್ಡ ಮಳೆಗಾಲದಲ್ಲಿ ಸುರಿಯುವ ಸಣ್ಣ ಮಳೆಗೂ ಕುಸಿಯುತ್ತಲೇ ಇದ್ದು ಒಂದು ವೇಳೆ ದೊಡ್ಡ ಮಟ್ಟದಲ್ಲಿ ಕುಸಿತಗೊಂಡರೆ ಹತ್ತಿರದ ಹಲವಾರು ಮನೆಗಳಿಗೆ, ಸಾರ್ವಜನಿಕ ಸಂಪತ್ತುಗಳಿಗೆ ಹಾನಿಯಾಗುವ ಸಂಭವವಿದೆ. ಈಗಾಗಲೇ ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಮತ್ತು ಸರಿಯಾಗ ಕ್ರಮಗಳನ್ನು ಕೈಗೊಂಡಿಲ್ಲ.
ಈ ಎಲ್ಲಾ ಹಿನ್ನಲೆಯಲ್ಲಿ ಪಾಲಿಕೆ ಆಡಳಿತ ಈ ಕೂಡಲೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆಯ ಮುಖ್ಯರಸ್ತೆ ಬಳಿಯಲ್ಲಿರುವ ಗುಡ್ಡದಿಂದ ಹರಿದು ಬರುವ ಕೆಸರು ಮಿಶ್ರಿತ ಮಳೆ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈಗಾಗಲೇ ರಸ್ತೆಯುದ್ದಕ್ಕೂ ಹರಿದು ಬಂದಿರುವ ಕೆಸರನ್ನು ತೆರವುಗೊಳಿಸಲು ಮುಂದಾಗಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಸಮಿತಿ ಮನವಿ ಮಾಡಿಕೊಂಡಿದೆ.
ನಿಯೋಗದಲ್ಲಿ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಯಾಝ್ ಜಲ್ಲಿಗುಡ್ಡೆ, ಕಾರ್ಯದರ್ಶಿ ಸಂತೋಷ್ ಬಜಾಲ್, ಪದಾಧಿಕಾರಿಗಳಾದ ಕಮಲಾಕ್ಷ ಬಜಾಲ್, ಅನ್ಸರ್ ಫೈಸಲ್ ನಗರ, ಜಗದೀಶ್ ಬಜಾಲ್, ಸತೀಶ್ ಶೆಟ್ಟಿ, ಮೋಹನ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಪಾಲಿಕೆ ಆಯುಕ್ತರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇವೆಂದು ಭರವಸೆ ನೀಡಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD