ದೇವಸ್ಥಾನದ ಮುಂದೆ ನಗ್ನವಾಗಿ ನಡೆದುಕೊಂಡು ಹೋದ ಯುವತಿಯ ಶವ ಕೆರೆಯಲ್ಲಿ ಪತ್ತೆ!
ಹೈದರಾಬಾದ್: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 25 ವರ್ಷದ ಮಾಜಿ ಸಾಫ್ಟ್ವೇರ್ ಉದ್ಯೋಗಿ (ಟೆಕ್ಕಿ) ಯುವತಿಯೊಬ್ಬರು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಯುವತಿ ನಗ್ನಾವಸ್ಥೆಯಲ್ಲಿ ದೇವಸ್ಥಾನದವರೆಗೆ ನಡೆದುಕೊಂಡು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿ ಈ ಹಿಂದೆ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಅವರು ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿದ್ದರು. ಸದ್ಯ ಹೈದರಾಬಾದ್ನ ಪೀರ್ಜಾದಿಗುಡದಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಪರಸ್ಪರ ದೂರವಿದ್ದು, ತಂದೆ ವಿಶಾಖಪಟ್ಟಣದಲ್ಲಿ ನೆಲೆಸಿದ್ದಾರೆ.
ಶುಕ್ರವಾರದಂದು ಯುವತಿ ಮತ್ತು ಆಕೆಯ ತಾಯಿ ಹೊಸದಾಗಿ ಖರೀದಿಸಲು ಯೋಜಿಸಿದ್ದ ಡಬಲ್ ಬೆಡ್ ರೂಮ್ ಅಪಾರ್ಟ್ ಮೆಂಟ್ ಒಂದನ್ನು ನೋಡಲು ಮಿಯಾಪುರಕ್ಕೆ ಹೋಗಿದ್ದರು. ಮನೆಗೆ ಮರಳಿದ ನಂತರ ಇಬ್ಬರೂ ಪ್ರತ್ಯೇಕ ಕೋಣೆಗಳಲ್ಲಿ ಮಲಗಿದ್ದರು. ಈ ವೇಳೆ ಯುವತಿ ಹೊರಗಿನಿಂದ ತನ್ನ ತಾಯಿಯ ಕೋಣೆಯ ಬಾಗಿಲನ್ನು ಲಾಕ್ ಮಾಡಿದ್ದಾರೆ. ನಂತರ ನಗ್ನಾವಸ್ಥೆಯಲ್ಲಿ ದೇವಸ್ಥಾನದ ಕಡೆಗೆ ನಡೆದುಹೋಗಿ, ಬಳಿಕ ಅಲ್ಲೇ ಸಮೀಪದಲ್ಲಿದ್ದ ಕೆರೆಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.
ಶನಿವಾರ ಮುಂಜಾನೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದ್ದು, ಕೆರೆಯಿಂದ ಯುವತಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ತಾಯಿಗೆ ಒಪ್ಪಿಸಲಾಗಿದೆ. ಮೃತ ಯುವತಿ ಹಾಗೂ ಆಕೆಯ ತಾಯಿ ಇಬ್ಬರೂ ತೀವ್ರ ರೀತಿಯ ಫೋಬಿಯಾ (ಭಯ) ಮತ್ತು ಮಾನಸಿಕ ಆತಂಕದಿಂದ ಬಳಲುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























