11:30 PM Thursday 16 - October 2025

ಬ್ರಾಹ್ಮಣರ ಹೆಣ್ಣುಮಕ್ಕಳು ಇತರ ಜಾತಿಯವರನ್ನು ಮದುವೆಯಾಗುವುದನ್ನು ತಡೆಯಬೇಕು | ಪೇಜಾವರ ಶ್ರೀ

17/03/2021

ಶಿವಮೊಗ್ಗ:  ಬ್ರಾಹ್ಮಣರ ಹೆಣ್ಣು ಮಕ್ಕಳು ಇತರ ಜಾತಿಯವರನ್ನು ಮದುವೆಯಾಗಲು ಮುಂದಾಗುವುದನ್ನು ತಡೆಯಬೇಕಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ  ಕಳೆದ 3 ದಿನಗಳಿಂದ ನಡೆಯುತ್ತಿರುವ  ಶ್ರೀಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಸ್ವಾಮೀಜಿಗಳು ಬ್ರಾಹ್ಮಣರ ಹೆಣ್ಣು ಮಕ್ಕಳಿಗೆ ಸಂಸ್ಕೃತಿ ಕಲಿಸುವುದು ಇಂದಿನ ಅಗತ್ಯವಾಗಿದೆ  ಎಂದು ಹೇಳಿದರು.

ಬ್ರಾಹ್ಮಣರ ಹೆಣ್ಣು ಮಕ್ಕಳು ಇತರ ಜಾತಿಯವರನ್ನು ಮದುವೆಯಾಗಲು ಮುಂದಾಗುವುದನ್ನು ತಡೆಯಲು ಮಾತೃ ಮಂಡಳಿ ರಚನೆ ಮಾಡಬೇಕಾದ ಅಗತ್ಯವಿದೆ. ಅದು ಮನೆಯಿಂದಲೇ ಆರಂಭವಾಗಬೇಕಿದೆ. ಸಾಮಾಜಿಕವಾಗಿ ಬ್ರಾಹ್ಮಣರ ಪ್ರತಿ ಕುಟುಂಬಗಳು ಬೆಳೆಯಬೇಕು ಎಂದು ಸ್ವಾಮೀಜಿಗಳು ಹೇಳಿದರು.

ಬ್ರಾಹ್ಮಣರ ಹೆಣ್ಣು ಮಕ್ಕಳು ಇತರ ಜಾತಿಯವರನ್ನು ಮದುವೆಯಾಗಲು ಮುಂದಾಗುತ್ತಿರುವ ಬಗ್ಗೆ ಬ್ರಾಹ್ಮಣ ಕುಟುಂಬಗಳು ಯೋಚಿಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು,  ಬ್ರಾಹ್ಮಣರ ಹೆಣ್ಣುಮಕ್ಕಳಿಗೆ ಶಿಕ್ಷಣದ ಜೊತೆಗೆ  ಧಾರ್ಮಿಕ ಶಿಕ್ಷಣವನ್ನೂ ನೀಡಬೇಕು. ಈ ಹಿನ್ನೆಲೆಯಲ್ಲಿ ಮನೆ ಮಕ್ಕಳು, ತಂದೆ-ತಾಯಿ, ಹಿರಿಯರು ಹೀಗೆ ಮಾತೃಮಂಡಳಿ ರಚನೆ ಮಾಡಬೇಕು ಎಂದು ಅವರು ಬ್ರಾಹ್ಮಣ ಸಮುದಾಯಕ್ಕೆ ಕರೆ ನೀಡಿದರು.

ಇನ್ನೂ ಅಯೋಧ್ಯೆ ರಾಮಮಂದಿರದ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮಮಂದಿರದಿಂದ ಇಡೀ ಹಿಂದೂಗಳ ಮಾತ್ರವಲ್ಲದೇ ಭಾರತೀಯರ ಕನಸು ಕೂಡ ನನಸಾಗುತ್ತಿದೆ. ರಾಮಮಂದಿರ ನಿರ್ಮಣವಾದರೆ ಸಾಲದು ಅದರ ನಿರ್ವಹಣೆಯನ್ನು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಸಬೇಕು ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version