2:07 AM Wednesday 15 - October 2025

ಅಧರ್ಮವೇ ತುಂಬಿರುವಾಗ ಧರ್ಮದ ಬಗ್ಗೆ ಮಾತನಾಡೋದು ಹೇಗೆ? | ಶಿಷ್ಯನ ಪ್ರಶ್ನೆಗೆ ಬುದ್ಧರು ನೀಡಿದ ಉತ್ತರ ಇಂದಿಗೂ ಪ್ರಸ್ತುತ

09/11/2020

ಗುರುವೇ  ಲೋಕದಲ್ಲಿ ಅಧರ್ಮವೇ  ಇರುವಾಗ ನಾವು ಧರ್ಮವನ್ನು ಹೇಗೆ ತಾನೆ  ಪ್ರಸ್ತುತ ಪಡಿಸಲು ಸಾಧ್ಯ ಎಂದು ಉಪಾಲಿಯು ಗೌತಮ ಬುದ್ಧರನ್ನು  ಪ್ರಶ್ನಿಸಿದನು.  ಗೌತಮ ಬುದ್ಧರು ಆಗ ಬೇರೇನೂ ವಿವರಣೆಗಳನ್ನು ನೀಡಲು ಹೋಗುವುದಿಲ್ಲ.  ಮೌನವಾಗಿ ಉಪಾಲಿಯನ್ನು ಕರೆದು ಬಾ ಎಂದು ಸನಿಹದಲ್ಲಿದ್ದ ಕಾಡಿಗೆ ಕರೆದುಕೊಂಡು ಹೋಗುತ್ತಾರೆ.

ಕಾಡು ಬಹಳ ದಟ್ಟವಾಗಿತ್ತು.  ಮುಂದೆ ನಡೆಯುತ್ತಾ ಹೋಗುತ್ತಿದ್ದಂತೆಯೇ ಕಾಡಿನಲ್ಲಿ ದಾರಿ ತಪ್ಪಿ ಹೋಗುತ್ತದೆ. ಯಾವ ಕಡೆಗೆ ಹೋಗಬೇಕು ಎನ್ನುವುದು ತಿಳಿಯದೇ ಇರುವ ಸಂದರ್ಭದಲ್ಲಿ, ಕಾಡಿನಲ್ಲಿ ಒಬ್ಬ ಬುಡಕಟ್ಟು ಸಮುದಾಯದ ವ್ಯಕ್ತಿ ಅವರಿಗೆ ಎದುರಾಗುತ್ತಾನೆ. ಆತ  ಬುದ್ಧರನ್ನು ಹಾಗೂ ಉಪಾಲಿಯನ್ನು ಬಹಳ ಗೌರವಗಳೊಂದಿಗೆ ಕಾಡಿನ ಅಂಚಿನ ವರೆಗೆ ಸೂಕ್ತ ದಾರಿಯಲ್ಲಿ ಕರೆದುಕೊಂಡು ಬಂದು ತಲುಪಿಸುತ್ತಾನೆ.

ಅಲ್ಲಿಯವರೆಗೆ ಮೌನವಾಗಿದ್ದ ಬುದ್ಧರು ಹೇಳುತ್ತಾರೆ, “ನೋಡಿದೆಯಾ ಉಪಾಲಿ,  ಒಂದು ವೇಳೆ ಧರ್ಮವಿಲ್ಲದೇ ಇರುತ್ತಿದ್ದರೆ, ನಾವು ಕಾಡಿನಿಂದ ಹೊರಗೆ ಬರಲು ಸಾಧ್ಯವಾಗುತ್ತಿತ್ತೇ? ನೋಡು ಕಾಡಿನೊಳಗು ಎಂತಹ ಧರ್ಮವಿದೆ ಅಲ್ಲವೇ?” ಎಂದು ಪ್ರಶ್ನಿಸುತ್ತಾರೆ.

ಹೌದು..! ಬುಡಕಟ್ಟು ಜನಾಂಗದ ಆ ವ್ಯಕ್ತಿಯಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಧರ್ಮವಿತ್ತು. ಕಾಡಿನಲ್ಲಿ ಸಿಲುಕಿಕೊಂಡವರಿಗೆ ಆತ ಸಹಾಯ ಮಾಡಬೇಕು ಎಂದೇನು ಕಡ್ಡಾಯ ನಿಯಮಗಳಿರಲಿಲ್ಲ. ಆದರೂ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ತಿಳಿದ ಆ ವ್ಯಕ್ತಿಯೊಳಗಿರುವ ಧರ್ಮ ಎಂತಹ ಅದ್ಭುತ ಧರ್ಮ ಅಲ್ಲವೇ? ಈ ವಿಚಾರ ಅರಿವಾಗುತ್ತಿದ್ದಂತೆಯೇ ಉಪಾಲಿ ಗೌತಮ ಬುದ್ಧರು ಹೇಳಿದ ಮಾತನ್ನು ಒಪ್ಪುತ್ತಾನೆ.

ಇತ್ತೀಚಿನ ಸುದ್ದಿ

Exit mobile version