ಕುರ್ಚಿಯ ವಿಷ್ಯಾ, ಬ್ಯಾಡವೋ ಶಿಷ್ಯಾ! | ಜ.6ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕಾರ: ಇದು ನಿಜನಾ?
ದೇವನಹಳ್ಳಿ: ಜನವರಿ 6ರಂದು ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಅಂತ ಡಿಕೆಶಿ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಕಿಡಿ ಹತ್ತಿಸಿದ್ದರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರವಾಗಿ ದೇವನಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ಆತನ ಮಾತನ್ನು ಯಾರೂ ನಂಬಲು ಹೋಗಬೇಡಿ, ಅವನ ಮೇಲೆ ಮೊದಲು ಕ್ರಮಕೈಗೊಳ್ಳಬೇಕು ಎಂದಿದ್ದು, ಈ ಮೂಲಕ ಹೊಸ ಚರ್ಚೆಗೆ ಆರಂಭದಲ್ಲೇ ಡಿಕೆಶಿ ಬ್ರೇಕ್ ಹಾಕಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಗೆ ಮಾತಿನ ಚಟ. ಯಾರು ಅವನ ಮಾತನ್ನು ನಂಬಲು ಹೋಗಬೇಡಿ ಡಿಕೆಶಿ ಎಂದು ಸಿಡಿಮಿಡಿಗೊಂಡಿದ್ದಾರೆ. ಆದರೆ ಅತ್ತ ಶಾಸಕ ಇಕ್ಬಾಲ್ ಹುಸೇನ್ ತನ್ನ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. 140 ಶಾಸಕರಿಗೂ ಡಿ.ಕೆ.ಶಿವಕುಮಾರ್ ಅಧ್ಯಕ್ಷರು. ಮೊದಲು ನೋಟಿಸ್ ಕೊಟ್ಟಿದ್ದಾರೆ, ಈಗಲೂ ಒಂದೆರಡು ಕೊಡಲಿ. ನೋಟಿಸ್ ಕೊಟ್ಟರೆ ನಾನು ಪಾಲನೆ ಮಾಡಬೇಕಾಗುತ್ತೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ನಾಯಕತ್ವ ಬದಲಾವಣೆ ಎನ್ನುವ ಪ್ರಸಂಗ ಹಲವು ತಿಂಗಳುಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಹೈಕಮಾಂಡ್ ಜೊತೆಗೆ ರಾಜ್ಯ ನಾಯಕರು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ದಿನಕ್ಕೊಬ್ಬರಂತೆ ಹೇಳಿಕೆ ನೀಡುತ್ತಿದ್ದಾರೆ. ಹೇಳಿಕೆ ನೀಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆಶಿ ಹೇಳುತ್ತಿದ್ದಾರೆ. ಆದರೆ ಯಾರ ಮೇಲೆಯೂ ಕ್ರಮಕೈಗೊಂಡಿರುವುದು ಕಾಣುತ್ತಿಲ್ಲ, ನೀನು ಅತ್ತಂತೆ ನಟಿಸು, ನಾನು ಹೊಡೆದಂತೆ ನಟಿಸುತ್ತೇನೆ ಎನ್ನುವ ರಾಜಕೀಯ ತಂತ್ರಗಾರಿಕೆ ಇದೇನಾ ಅಂತ ಜನ ಪ್ರಶ್ನೆ ಮಾಡುವಂತಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























